ADVERTISEMENT

‘ಜಗತ್ತಿನ ಗತಿ ರೂಪಿಸುವ ಹಬ್ಬ’

ದಕ್ಷಿಣ ಕನ್ನಡ ಸಂಘದಿಂದ ಯುಗಾದಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 19:30 IST
Last Updated 15 ಏಪ್ರಿಲ್ 2018, 19:30 IST

ಬೆಂಗಳೂರು: ನಯನ ಸಭಾಂಗಣದ ವೇದಿಕೆ ಅಂಚಿನಲ್ಲಿ ಬಾಳೆಎಲೆ, ಮಾವಿನ ಎಲೆಗಳ ಅಲಂಕಾರ. ವೇದಿಕೆಯಲ್ಲಿ ಭಕ್ತಿಗೀತೆ, ಭರತನಾಟ್ಯ, ಕಥಕ್‌, ಜನಪದ, ಯಕ್ಷಗಾನ ನೃತ್ಯಗಳ ವೈಭವ. ಬಂದವರಿಗೆಲ್ಲಾ ಉಪ್ಪಿಟ್ಟು, ಮಂಗಳೂರು ಬನ್‌ ಆತಿಥ್ಯ.

ದಕ್ಷಿಣ ಕನ್ನಡ ಸಂಘ ಭಾನುವಾರ ಆಚರಿಸಿದ ಯುಗಾದಿ ಹಬ್ಬದ ಚಿತ್ರಣವಿದು. ‘ಮಕ್ಕಳು ಮೊಬೈಲ್‌ ವಿಡಿಯೊಗಳಲ್ಲಿ ಕಳೆದು ಹೋಗದಂತೆ ಕಾಳಜಿ ವಹಿಸಿ ಸಾಮಾಜಿಕ ಚಿಂತಕರಾಗುವಂತೆ ಸಂಸ್ಕಾರ ನೀಡಿ. ಇನ್ನೊಬ್ಬರನ್ನು ಸದಾ ಗೌರವಿಸಿ. ಇದೇ ನೆಮ್ಮದಿಯ ದಾರಿ’ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

‘ಭಾರತೀಯ ಸಂಸ್ಕೃತಿಯ ಹೊಸವರ್ಷ ಆಚರಣೆ ಕ್ಯಾಲೆಂಡರ್‌ ಬದಲಿಸುವ ನ್ಯೂ ಈಯರ್‌ ಅಲ್ಲ, ಜಗತ್ತಿನ ಗತಿಗೆ ಸಂಬಂಧಿಸಿದ ಬದಲಾವಣೆಯನ್ನು ನಿರೂಪಿಸುವ ಹಬ್ಬ’ ಎಂದರು.

ADVERTISEMENT

‘ಸಂಘ ಪ್ರಾರಂಭವಾಗಿ 59ನೇ ವರ್ಷವಾಯಿತು. ಇದುವರೆಗೆ ಸಂಘದ್ದೇ ಆದ ಸ್ವಂತ ಸ್ಥಳ ಇಲ್ಲ. ಮುಂದಿನ ಪೀಳಿಗೆಗೆ ಕೊಡುಗೆ ಆಗುವಂತೆ ಸಂಘದ್ದೇ ಆದ ಸ್ಥಳ ನಿರ್ಮಿಸುವ ಬಗೆಗೆ ಚಿಂತನೆ ನಡೆಸಬೇಕು‘ ಎಂದು ಲೇಖಕ ಉದಯ ಧರ್ಮಸ್ಥಳ ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಕಲಾಂ ಅವರೊಂದಿಗೆ ಒಡನಾಟ ಹೊಂದಿದ್ದ ಜಯಪ್ರಕಾಶ್‌ ರಾವ್‌ ರಚಿಸಿರುವ ‘ಕಲಾಂ ಜೀವನ ಧರ್ಮ’ ಪುಸ್ತಕವನ್ನು ಸ್ವಾಮೀಜಿ ಬಿಡುಗಡೆ ಮಾಡಿದರು. ಕಲಾವಿದ ಟಿ.ಎಸ್‌.ನಾಗರಾಜ ಉಪಾಧ್ಯಾಯ ಹಾಗೂ ನೀಲಕಂಠ ಅಡಿಗ ದಂಪತಿಯನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.