ADVERTISEMENT

ಜನರಿಂದ ಅಧಿಕ ಬಡ್ಡಿ ವಸೂಲಿ: ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 18:30 IST
Last Updated 1 ಜೂನ್ 2011, 18:30 IST

ಬೆಂಗಳೂರು: ಸಾರ್ವಜನಿಕರಿಗೆ ಸಾಲ ನೀಡಿ ಕಾನೂನು ಬಾಹಿರ ವಾಗಿ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ನಂಜುಂಡ (44) ಎಂಬಾತನನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

 ಆರೋಪಿಯಿಂದ ಎರಡು ಲಕ್ಷ ನಗದು, ಸಾಲಕ್ಕೆ ಭದ್ರತೆಯಾಗಿ ಪಡೆದ ಬ್ಯಾಂಕ್ ಚೆಕ್‌ಗಳು, ಸಾಲಗಾರರ ಸಹಿ ಇರುವ ಛಾಪಾ ಕಾಗದಗಳ, ಪಿಂಚಣಿ ಪುಸ್ತಕ ಸೇರಿದಂತೆ 170 ದಾಖಲೆಗಳು, ಬೈಕ್ ಮತ್ತು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

`ನಿವೃತ್ತ ನೌಕರರು, ಉದ್ಯಮಿಗಳು, ವ್ಯಾಪಾರಸ್ಥರಿಗೆ ಸಾಲ ನೀಡುತ್ತಿದ್ದ ನಂಜುಂಡ ಶೇ 10ರಿಂದ 20ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದ. ಸಾಲದ ಹಣ ನೀಡದವರಿಗೆ ಆತ ಬೆದರಿಸುತ್ತಿದ್ದ. ಹಣಕ್ಕೆ ಭದ್ರತೆಯಾಗಿ ಆತ ಚೆಕ್‌ಗಳು, ಪ್ರಾಮಿಸರಿ ನೋಟ್ ಮತ್ತಿತರ ದಾಖಲೆಗಳನ್ನು ಪಡೆಯುತ್ತಿದ್ದ~ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರು ತಿಳಿಸಿದರು.

`ಆತ ಸುಮಾರು ಮೂರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದ~ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಪರಿಚಿತ ವ್ಯಕ್ತಿಯ ಕೊಲೆ: ಸುಮಾರು ಮೂವತ್ತು ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ಯಶವಂತಪುರದ ಬಜಾರ್ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.ಸುಲಭ್ ಶೌಚಾಲಯದ ಬಳಿ ಆತನ ಶವ ಪತ್ತೆಯಾಗಿದೆ. ತಲೆ, ಕೆನ್ನೆ, ಹಣೆಗೆ ದುಷ್ಕರ್ಮಿಗಳು ಮಚ್ಚಿನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾರೆ.

ಮೃತನ ಗುರುತು ಪತ್ತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.