ಬೆಂಗಳೂರು: ‘ರಾಜ್ಯ ಸರ್ಕಾರ ಸಾಮಾನ್ಯ ಜನರ ಅಪೇಕ್ಷೆ ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ನೀತಿ ರೂಪಿಸಲು ಮುಂದಾಗಿದೆ’ ಎಂದು`ನವ ಕರ್ನಾಟಕ ಮುನ್ನೋಟ- 2025' ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಣುಕಾ ಚಿದಂಬರಂ ತಿಳಿಸಿದರು.
ಈ ಯೋಜನೆ ಕುರಿತು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಮುಂದಿನ ಏಳು ವರ್ಷಗಳಲ್ಲಿ ರಾಜ್ಯ ಯಾವ ರೀತಿ ಅಭಿವೃದ್ಧಿಯಾಗಬೇಕು ಎಂಬ ಬಗ್ಗೆ ಜನರಿಂದ ಸಲಹೆ ಪಡೆಯಲಾಗುತ್ತಿದೆ. ಪ್ರತಿಯೊಂದು ಇಲಾಖೆಯ ಕಾರ್ಯದರ್ಶಿ ಜತೆಗೆ ಚರ್ಚಿಸಿ ಅಭಿವೃದ್ಧಿಗೆ 13 ವಲಯಗಳನ್ನು ಗುರುತಿಸಲಾಗಿದೆ. 30 ಜಿಲ್ಲೆಗಳಲ್ಲೂ ಕಾರ್ಯಾಗಾರ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ' ಎಂದು ಹೇಳಿದರು.
‘ಯೋಜನೆಗೆ ಸಂಬಂಧಪಟ್ಟಂತೆ ಈಗಾಗಲೇ 15 ಜಿಲ್ಲೆಗಳಲ್ಲಿ ಕಾರ್ಯಾಗಾರ ನಡೆಸಲಾಗಿದೆ. ಎಲ್ಲ ವರ್ಗದ ಜನರು ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸಲಹೆ, ಅಭಿಪ್ರಾಯ ನೀಡಲು ಅವಕಾಶ ಕಲ್ಪಿಸಲಾಗಿದೆ. ರೈತರಿಂದಲೂ ಉಪಯುಕ್ತ ಸಲಹೆಗಳು ಬಂದಿವೆ. ಸಾರ್ವಜನಿಕರು ಫೇಸ್ಬುಕ್, ಟ್ವಿಟರ್ ಮೂಲಕವೂ ಸಲಹೆ ನೀಡಬಹುದು. ಸಾರ್ವಜನಿಕರು, ವಿವಿಧ ಕ್ಷೇತ್ರಗಳ ತಜ್ಞರು ಹಾಗೂ ಸಂಘ–ಸಂಸ್ಥೆಗಳ ಅಭಿಪ್ರಾಯ ಕ್ರೋಡೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಅವರು ತಿಳಿಸಿದರು.
‘ಎಲ್ಲ ಜಿಲ್ಲೆಗಳಿಂದ ಮಾಹಿತಿ ಸಂಗ್ರಹಿಸಿದ ನಂತರ ಎರಡು ಹಂತಗಳಲ್ಲಿ ಪರಿಶೀಲಿಸಲಾಗುವುದು. ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಪ್ರತಿ ಇಲಾಖೆಯ ಮುಖ್ಯಸ್ಥರನ್ನು ಒಳಗೊಂಡ ಸಮಿತಿಯು ಮುನ್ನೋಟದ ಕರಡನ್ನು ಪರಿಶೀಲಿಸಲಿದೆ. ಉನ್ನತ ಮಟ್ಟದ ಮೆಲ್ವಿಚಾರಣಾ ಸಮಿತಿಯು ಅಂತಿಮ ಪರಿಶೀಲನೆ ನಡೆಸಲಿದೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.