ಬೆಂಗಳೂರು: ‘ಮೈಸೂರಿನಲ್ಲಿ ನಡೆಯಲಿರುವ 83ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಏನು ಮಾತನಾಡುತ್ತೀರಿ ಎಂದು ಎಲ್ಲರೂ ಕೇಳುತ್ತಿದ್ದಾರೆ. ಅಲ್ಲಿ ಜನರ ಧ್ವನಿಯಾಗಿ ಮಾತನಾಡುತ್ತೇನೆ’ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದರು.
ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂದೇಶ ಕೊಡುವವರು ಪ್ರವಾದಿ. ಸಮ್ಮೇಳನದಲ್ಲಿ ಸಂದೇಶ ಕೊಡುವುದಷ್ಟೇ ಸಮ್ಮೇಳನಾಧ್ಯಕ್ಷರ ಕೆಲಸವಲ್ಲ. ಸಮಕಾಲಿನ ಕಾಲಘಟ್ಟದಲ್ಲಿ ಎದುರುಗುತ್ತಿರುವ ಸಮಸ್ಯೆಗಳನ್ನು ಅರ್ಥೈಸಿಕೊಂಡು ಸಂವಿಧಾನ ಚೌಕಟ್ಟಿನಲ್ಲಿ ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ’ ಎಂದು ಹೇಳಿದರು.
'ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಬರಹದ ಮೂಲಕ ಬರಹಗಾರರು ಮಾತನಾಡಬೇಕಿದೆ. ಕನ್ನಡ ಎಂಬ ಮೂರಕ್ಷರಗಳಲ್ಲಿ ನಾಡಿನ ಜನರ ಬದುಕು ಅಡಕವಾಗಿದೆ. ಆದ್ಯತೆಗಳ ಮೇರೆಗೆ ಪಟ್ಟಿ ಮಾಡಿಕೊಂಡು ಸಮಸ್ಯೆಗಳ ವಿರುದ್ಧ ಹೋರಾಡಬೇಕಿದೆ. ಜನಾಂದೋಲನ ಮಾಡದ ಹೊರತು ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ತಿಳಿಸಿದರು.
ಸಾಹಿತಿ ಜರಗನಹಳ್ಳಿ ಶಿವಶಂಕರ್, ‘80–90ರ ದಶಕದಲ್ಲಿ ಮಹಾನ್ ದಿಗ್ಗಜರು ಕನ್ನಡ ಸಾಹಿತ್ಯ ಲೋಕದಲ್ಲಿದ್ದರು. ದಿಗ್ಗಜರ ಪಡೆಯನ್ನು ಕಳೆದುಕೊಂಡ ಸಾಹಿತ್ಯವು ಇಂದು ಶೂನ್ಯಾವಸ್ಥೆಯಲ್ಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.