ADVERTISEMENT

ಜನಾರ್ದನ ರೆಡ್ಡಿಗೆ ನೋಟಿಸ್‌ ಸಾಧ್ಯತೆ

ಐಟಿ ಅಧಿಕಾರಿಗಳಿಂದ ಭೀಮಾ ನಾಯ್ಕ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2016, 19:30 IST
Last Updated 14 ಡಿಸೆಂಬರ್ 2016, 19:30 IST

ಬೆಂಗಳೂರು: ಸಿಐಡಿ ವಶದಲ್ಲಿರುವ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾ ನಾಯ್ಕ ಅವರನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.

ಶೇಷಾದ್ರಿ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ಸಂಜೆ ಹೋಗಿದ್ದ ಇಬ್ಬರು ಹಿರಿಯ ಅಧಿಕಾರಿಗಳು, ಗಂಟೆಗಳವರೆಗೆ ವಿಚಾರಣೆ ನಡೆಸಿದರು ಎನ್ನಲಾಗಿದೆ.
‘ಅನಾರೋಗ್ಯ ನೆಪದಲ್ಲಿ ಸಿಐಡಿ ತನಿಖೆಗೆ ಅಸಹಕಾರ ನೀಡುತ್ತಿರುವ ಭೀಮಾ ನಾಯ್ಕ, ತಮ್ಮ ಮೇಲಿನ ಆರೋಪಗಳ ಬಗ್ಗೆ  ಐಟಿ ಅಧಿಕಾರಿಗಳೊಂದಿಗೆ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ’

‘ಜತೆಗೆ ಐಟಿ ಅಧಿಕಾರಿಗಳು ಸಿದ್ಧಪಡಿಸಿಕೊಂಡು ಬಂದಿದ್ದ ಪ್ರಶ್ನೆಗಳಿಗೂ ಉತ್ತರ ನೀಡಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ಇಲಾಖೆಗಿರುವ ವಿಶೇಷ ಅಧಿಕಾರದಡಿ ಸಿಐಡಿ ಕಚೇರಿಗೆ ಹೋಗಿ ಭೀಮಾ ನಾಯ್ಕ ಅವರ ವಿಚಾರಣೆ ನಡೆಸಲಾಯಿತು. ಅವರು ಕೆಲ ಮಾಹಿತಿ ನೀಡಿದ್ದು, ಅವುಗಳಿಗೆ ಸ್ಪಷ್ಟನೆ ಪಡೆಯಲು ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಕೆಲವರನ್ನು ವಿಚಾರಣೆಗೆ ಒಳಪಡಿಸಬೇಕಿದೆ. ಹೀಗಾಗಿ ಅವರಿಗೆಲ್ಲ ನೋಟಿಸ್‌ ನೀಡುತ್ತೇವೆ’ ಎಂದು ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ: ‘ಅನಾರೋಗ್ಯದಿಂದ ಬಳಲುತ್ತಿದ್ದೇನೆ’ ಎಂದು  ಭೀಮಾ ನಾಯ್ಕ ಹೇಳಿದ್ದರಿಂದ  ಬುಧವಾರ ಅವರನ್ನು ಬೌರಿಂಗ್‌ ಆಸ್ಪತ್ರೆಗೆ ಕರೆದುಕೊಂಡು  ಹೋದ ಸಿಐಡಿ ಸಿಬ್ಬಂದಿ, ಚಿಕಿತ್ಸೆ ಕೊಡಿಸಿದರು.

‘ಆಸ್ಪತ್ರೆಯಲ್ಲಿ ಅವರ ಆರೋಗ್ಯ ತಪಾಸಣೆ ನಡೆಸಲಾಯಿತು. ಎರಡು ಗಂಟೆಗಳವರೆಗೆ  ಆಸ್ಪತ್ರೆಯಲ್ಲಿದ್ದ ಅವರಿಗೆ ಚಿಕಿತ್ಸೆ ಕೊಟ್ಟು ಕಳುಹಿಸಲಾಗಿದೆ’ ಎಂದು ವೈದ್ಯರೊಬ್ಬರು ತಿಳಿಸಿದರು. ಚಿಕಿತ್ಸೆ ಬಳಿಕ ಅವರನ್ನು ಸಿಐಡಿ ಸಿಬ್ಬಂದಿ, ಕಚೇರಿಗೆ ಕರೆದುಕೊಂಡು ಬಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.