ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು, ಈ ಪ್ರಕರಣದ ವಿಚಾರಣೆಯು ವಿಳಂಬವಾಗುವ ಸಂಬಂಧ ಮೇಲಿಂದ ಮೇಲೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೋರ್ಟ್ಗೆ ತಿಳಿಸಿದರು.ತಮ್ಮ ವಿರುದ್ಧದ ಸಾಕ್ಷ್ಯಗಳ ತರ್ಜುಮೆ ಕುರಿತಂತೆ ಜಯಲಲಿತಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಬಿ.ವಿ.ಆಚಾರ್ಯ ಅವರು ಈ ವಾದ ಮಂಡಿಸಿದರು.
ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಇವರ ವಿರುದ್ಧ ಇರುವ ಸಾಕ್ಷ್ಯಗಳನ್ನು ತಮಿಳಿನಿಂದ ಇಂಗ್ಲಿಷ್ಗೆ ತರ್ಜುಮೆ ಮಾಡಲಾಗಿದ್ದು, ಈ ತರ್ಜುಮೆ ಸರಿಯಾಗಿಲ್ಲ ಎನ್ನುವುದು ಜಯಾ ಆರೋಪ. ಈ ಹಿನ್ನೆಲೆಯಲ್ಲಿ ಎಲ್ಲ ದಾಖಲೆಗಳಲ್ಲಿನ ಮಾಹಿತಿಗಳನ್ನು ಹೊಸದಾಗಿ ತರ್ಜುಮೆ ಮಾಡಲು ಆದೇಶಿಸಬೇಕು ಎಂದು ಕೋರಿದ್ದಾರೆ. ಅವರ ಈ ಮನವಿಯನ್ನು ನಗರದ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಅದನ್ನು ಅವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ತರ್ಜುಮೆ ಮಾಡಿರುವ ದಾಖಲೆಗಳನ್ನು 2005ರ ವೇಳೆಯಲ್ಲಿಯೇ ಜಯಲಲಿತಾ ಅವರಿಗೆ ನೀಡಲಾಗಿದೆ. ಈಗ ಅವರು ಕ್ಷುಲ್ಲಕ ಕಾರಣವೊಡ್ಡಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿ ವಜಾ ಮಾಡಬೇಕು ಎಂದು ಆಚಾರ್ಯ ಕೋರಿದರು. ನ್ಯಾಯಮೂರ್ತಿ ಕೆ.ಎನ್. ಕೇಶವನಾರಾಯಣ ವಿಚಾರಣೆ ಮುಂದೂಡಿದರು.
ಶಾಲೆ ವಿರುದ್ಧ ಅರ್ಜಿ: ನೋಟಿಸ್
ಒಂದು ವರ್ಷದಿಂದ ಮಾನ್ಯತೆ ಪಡೆಯದೇ ಶಾಲೆ ನಡೆಸುತ್ತಿರುವ ಆರೋಪ ಹೊತ್ತ ರಾಜಾಜಿನಗರದಲ್ಲಿನ ವಾಣಿ ಪಬ್ಲಿಕ್ ಸ್ಕೂಲ್ಗೆ ನೋಟಿಸ್ ಜಾರಿಗೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.ಈ ಶಾಲೆಯ ವಿರುದ್ಧ ಶಾಲೆಯ ಪೋಷಕರ ಸಂಘ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆಗೂ ತುರ್ತು ನೋಟಿಸ್ ಜಾರಿಗೆ ಆದೇಶಿಸಿದ್ದಾರೆ.
2010ರ ಮಾರ್ಚ್ 31ರಿಂದ ಮಾನ್ಯತೆ ಪಡೆದುಕೊಳ್ಳದೇ ಶಾಲೆ ಕಾರ್ಯ ನಿರ್ವಹಿಸುತ್ತಿದೆ. ಈ ಶಾಲೆಗೆ 30 ವರ್ಷಗಳ ಆಧಾರದ ಮೇಲೆ ನೀಡಿರುವ ಗುತ್ತಿಗೆಯ ಅವಧಿ 2007ರ ಜೂನ್ 3ರಂದೇ ಕೊನೆಗೊಂಡಿದೆ. ಆದರೆ ಗುತ್ತಿಗೆಯನ್ನು ನವೀಕರಣಗೊಳಿಸಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.ಇದರ ಜೊತೆಗೆ ನಿಯಮ ಉಲ್ಲಂಘಿಸಿ ಐಸಿಎಸ್ಸಿ ಹಾಗೂ ರಾಜ್ಯ ಪಠ್ಯಕ್ರಮಗಳನ್ನು ಇಲ್ಲಿ ಕಲಿಸಲಾಗುತ್ತಿದೆ ಎನ್ನುವುದು ಆರೋಪ. ವಿಚಾರಣೆಯನ್ನು ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.