ADVERTISEMENT

ಜಾತಿ ಕಾರಣಕ್ಕೆ ತಪ್ಪಿದ ಉನ್ನತ ಸ್ಥಾನ: ವಿಷಾದ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST
ಬೆಂಗಳೂರಿನಲ್ಲಿ ಗುರುವಾರ ನಡೆದ ಡಾ.ಬಿ.ಆರ್‌.ಅಂಬೇಡ್ಕರ್‌, ಬಾಬು ಜಗಜೀವನ್‌ರಾಮ್‌ ಅವರ ಜಯಂತಿಯ 17ನೇ  ವಾರ್ಷಿಕೋತ್ಸವದಲ್ಲಿ ಜಲ ಮಂಡಳಿ ಅಧ್ಯಕ್ಷ ಎಂ.ಎಸ್‌.ರವಿಶಂಕರ್‌ ಅವರು ಚಿತ್ರನಟ ಎಸ್‌.ಶಿವರಾಮ್‌ ಅವರನ್ನು ಸನ್ಮಾನಿಸಿದರು
ಬೆಂಗಳೂರಿನಲ್ಲಿ ಗುರುವಾರ ನಡೆದ ಡಾ.ಬಿ.ಆರ್‌.ಅಂಬೇಡ್ಕರ್‌, ಬಾಬು ಜಗಜೀವನ್‌ರಾಮ್‌ ಅವರ ಜಯಂತಿಯ 17ನೇ ವಾರ್ಷಿಕೋತ್ಸವದಲ್ಲಿ ಜಲ ಮಂಡಳಿ ಅಧ್ಯಕ್ಷ ಎಂ.ಎಸ್‌.ರವಿಶಂಕರ್‌ ಅವರು ಚಿತ್ರನಟ ಎಸ್‌.ಶಿವರಾಮ್‌ ಅವರನ್ನು ಸನ್ಮಾನಿಸಿದರು   

ಬೆಂಗಳೂರು: ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್‌ರಾಮ್‌ ಅವರು ದಲಿತರಾಗಿದ್ದ ಕಾರಣ ಅಂದು ಪ್ರಧಾನಿ ಅಥವಾ ರಾಷ್ಟ್ರಪತಿ ಸ್ಥಾನವನ್ನು ಅಲಂಕ­ರಿಸಲು ಸಾಧ್ಯವಾಗಲಿಲ್ಲ ಎಂದು ಅಖಿಲ ಭಾರತ ಪರಿಶಿಷ್ಟ ಜಾತಿ, ಪರಿ­ಶಿಷ್ಟ ವರ್ಗ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಡಾ.ಹನುಮಂತಪ್ಪ ಅಭಿಪ್ರಾಯಪಟ್ಟರು.

ಜಲ ಮಂಡಳಿಯ ಸ್ವಚ್ಛತಾ ಕೆಲಸ­ಗಾರರ ಸಂಘಟನೆ ಗುರುವಾರ ನಗರ­ದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್‌.­ಅಂಬೇಡ್ಕರ್‌ ಹಾಗೂ ಬಾಬು ಜಗ­ಜೀವನ್‌­ರಾಮ್‌ ಅವರ ಜಯಂತಿಯ 17ನೇ  ವಾರ್ಷಿಕೋತ್ಸವ ಕಾರ್ಯ­ಕ್ರಮ­ದಲ್ಲಿ  ಮಾತನಾಡಿದರು.  ದೇಶದ ಪ್ರಧಾನಿ ಅಥವಾ ರಾಷ್ಟ್ರ­ಪತಿ­­ಯಾಗಲು ಎಲ್ಲ ರೀತಿ­ಯಲ್ಲೂ  ಅರ್ಹ­ರಾಗಿದ್ದ ಜಗಜೀವನ್‌­ರಾಮ್‌ ಅವರಿಗೆ ಕೇವಲ ಜಾತಿಯ ಕಾರಣಕ್ಕೆ ಆ ಸ್ಥಾನಗಳು ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ 50 ವರ್ಷಗಳಿಂದ ಸರ್ಕಾರ ದಲಿತರ ಏಳಿಗೆಗಾಗಿ ಸಾಕಷ್ಟು ಅನು­ದಾನ­ವನ್ನು ನೀಡುತ್ತಿದೆ. ಆದರೆ ಈ ಬಗ್ಗೆ ಜನರಲ್ಲಿ ಅರಿವಿಲ್ಲದ ಕಾರಣ ಅದು ಸರಿಯಾಗಿ ಫಲಾನುಭವಿಗಳನ್ನು ತಲುಪುತ್ತಿಲ್ಲ ಎಂದರು. ‘ಈ ಹಿನ್ನೆಲೆಯಲ್ಲಿ ಇನ್ನಾದರೂ ದಲಿತರು ಸ್ವಾಭಿಮಾನಿಗಳಾಗಿ ತಮ್ಮ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆ­ಸ­­ಬೇಕು. ಜೊತೆಗೆ ನಮ್ಮಲ್ಲೇ ಒಡಕು ಉಂಟುಮಾಡಿ ಆಳುವ ಜನರಿಗೆ ಪಾಠ ಕಲಿಸಲು ಮುಂದಾಗ­ಬೇಕು’ ಎಂದು ಕರೆ ನೀಡಿದರು.

ಚಿತ್ರನಟ ಎಸ್‌.ಶಿವರಾಮ್‌ ಮಾತ­ನಾಡಿ, ಚಿತ್ರ ರಂಗದಲ್ಲಿ ಪ್ರಶಸ್ತಿಗಳ ಹಂಚಿಕೆ­ಯಲ್ಲೂ ಲಾಬಿ ಪ್ರಾರಂಭ­ವಾಗಿದ್ದು, ಪ್ರಶಸ್ತಿಗಾಗಿ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ‘ಚಲನಚಿತ್ರಗಳಿಗೆ ನೀಡುವ ಕೇಂದ್ರ ಪ್ರಶಸ್ತಿಗಳಲ್ಲಿ ಹೆಚ್ಚಿನವು ತಮಿಳುನಾಡಿನ ಪಾಲಾಗುತ್ತಿದ್ದು, ರಾಜ್ಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರಶಸ್ತಿಗಳು ಸಿಗುತ್ತಿಲ್ಲ. ಇದಕ್ಕೆ ಕಾರಣ ನಮ್ಮಲ್ಲಿ ಹೋರಾಟದ ಮನೋಭಾವ ಇಲ್ಲದೇ ಇರುವುದು’  ಎಂದು ದೂರಿದರು. 

ಹೈಕೋರ್ಟ್‌ ಮೌಖಿಕವಾಗಿ ಸೂಚಿ­ಸಿ­ರುವಂತೆ ಅಶ್ಲೀಲ ಚಲನಚಿತ್ರಗಳಿಗೆ ಕಡಿವಾಣ ಹಾಕಿ, ಒಳ್ಳೆಯ ಮೌಲ್ಯ­ಗಳನ್ನು ಹೊಂದಿರುವ ಚಿತ್ರಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು. ನಟ ಶಿವ­ರಾಮ್‌ ಸೇರಿದಂತೆ ಇತರೆ ಗಣ್ಯರನ್ನು ಸನ್ಮಾನಿಸಲಾಯಿತು. ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ಎಂ.ಎಸ್‌.­ರವಿ­ಶಂಕರ್‌,  ಮಾಜಿ ಮೇಯರ್‌ ಹುಚ್ಚಪ್ಪ, ಪ್ರಧಾನ ಎಂಜಿನಿಯರ್‌ ಟಿ.ವೆಂಕಟರಾಜು ಹಾಗೂ ಜಲ­ಮಂಡಳಿ ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.