ADVERTISEMENT

ಜಿ.ಪಿ.ರಾಜರತ್ನಂ ಅಪರೂಪದ ಶಕ್ತಿ:ರಾಜಗೋಪಾಲ್‌

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 19:30 IST
Last Updated 6 ಡಿಸೆಂಬರ್ 2013, 19:30 IST

ಬೆಂಗಳೂರು: ‘ಪುಸ್ತಕ ಪರಿಚಾರಿಕೆ ಜನ್ಮ ಸಿದ್ಧ ಹಕ್ಕು, ಬೋಧನೆಯೆಂಬುದು ಕರ್ತವ್ಯ ಎಂದು ಭಾವಿಸಿದ್ದ ಜಿ.ಪಿ.ರಾಜರತ್ನಂ ಅವರು ಒಂದು ಸಂಸ್ಥೆಯಂತೆ ಕೆಲಸ ಮಾಡುತ್ತಿದ್ದರು’ ಎಂದು ಕವಿ ಕ.ವೆಂ.ರಾಜಗೋಪಾಲ್‌ ಹೇಳಿದರು.

ಅಭಿನವ ಪ್ರಕಾಶನವು ನಗರದಲ್ಲಿ ಜಿ.ಪಿ. ರಾಜರತ್ನಂ ಅವರ ಜನ್ಮ ದಿನದ ಪ್ರಯುಕ್ತ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೂರು ಕೃತಿ ಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಅಪರೂಪದ ಶಕ್ತಿಯಾಗಿದ್ದ ಅವರು ವಿದ್ಯಾರ್ಥಿ ಗಳೊಂದಿಗೆ ಹೇಗೆ ಬೆರೆಯಬೇಕು, ವಿದ್ಯಾರ್ಥಿಗಳಿಗೆ ವಿಷಯಗಳನ್ನು ಮನದಟ್ಟು ಮಾಡಲು ಹೇಗೆ ಸಿದ್ಧರಾಗಿ ಬರಬೇಕು ಎನ್ನುವುದಕ್ಕೆ ಮಾದರಿ ಯಾಗಿದ್ದರು. ಬೋಧನೆಯನ್ನು ಕರ್ತವ್ಯದಂತೆ ಭಾವಿಸಿದ್ದರು’ ಎಂದರು.
ಕವಿ ಎಚ್‌.ಎಸ್‌.ರಾಘವೇಂದ್ರರಾವ್‌ ಅವರ  ಅಮೆರಿಕದ ಕವಿ ಎಡ್‌. ಕೂಸರ್‌ ಕವಿತೆಗಳ ಕನ್ನಡ ರೂಪಾಂತರ ‘ಮಂಜು ಮಣ್ಣು ಮೌನ’ ಸಂಕಲನದ ಕುರಿತು ಲೇಖಕ ಆನಂದ ಝಂಝರವಾಡ ಮಾತ­ನಾಡಿ,

‘ಕೇಳುವಿಕೆಯು ಭ್ರಷ್ಟಗೊಂಡಿರುವ ಈ ಹೊತ್ತಿ­ನಲ್ಲಿ, ಕಾಣಿಸುವ ಮೂಲಕ ಕೇಳಿಸುವ ಗುಣ ಹೊಂದಿ­ರುವ ಕೂಸರ್‌ ಕವಿತೆಗಳನ್ನು ಕನ್ನಡ ಬದುಕು, ಕಾವ್ಯ ಪರಂಪರೆ ಹಾಗೂ ಪ್ರತಿಭೆಯ ಬೇರುಗಳನ್ನು ಈ ಮಣ್ಣಿ­ನಲ್ಲಿಯೇ ಇಳಿಬಿಟ್ಟಂತೆ ಕನ್ನಡೀಕರಿಸಿದ್ದಾರೆ’ ಎಂದು ವಿಶ್ಲೇಷಿಸಿದರು. ಕವಿ ಅಬ್ದುಲ್‌ ರಶೀದ್‌ ಅವರ ‘ನರಕದ ಕೆನ್ನಾಲಿಗೆಯಂತ ನಿನ್ನ ಬೆನ್ನುರಿ’ ಕವನ ಸಂಕಲನದ ಕುರಿತು ಕಥೆಗಾರ ಎಂ.ಎಸ್‌.ಶ್ರೀರಾಮ್‌ ಮಾತನಾಡಿ, ‘ಈ ಕವನಗಳಲ್ಲಿ ಮುಗ್ಧತೆ ಮತ್ತು ತುಂಟತನ ಏಕಪ್ರಕಾರವಾಗಿವೆ. ಯಾವುದೇ ಕಾಲಕ್ಕೂ ಸಲ್ಲಬಹು ದಾದ ಕವನಗಳು. ಯೌವ್ವನವನ್ನು ಕಾಪಾಡಿಕೊಳ್ಳುವ ಗುಣವು ಕಾಣುತ್ತದೆ’ ಎಂದರು.

ಎಚ್‌ಎಸ್‌ವಿ ಅವರ ‘ಮಕ್ಕಳಿಗಾಗಿ ಪಂಪ’ ಕೃತಿ ಕುರಿತು ವಿಮರ್ಶಕ ರಾಮಲಿಂಗಪ್ಪ ಟಿ. ಬೇಗೂರು, ‘ನೈತಿಕ ವಿವೇಕವನ್ನು ಇಟ್ಟುಕೊಂಡು ಸರಳವಾಗಿ ಕಡಿಮೆ ಪದಗಳಲ್ಲಿ ಮಕ್ಕಳಿಗೆ ಮುಟ್ಟುವಂತೆ ಪಂಪನನ್ನು ಪರಿಚಯಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT