ಬೆಂಗಳೂರು: ಸರ್ಕಾರ ಜೂನ್ 7 ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ವಿಶ್ವ ಹೂಡಿಕೆದಾರರ ಸಮಾವೇಶವನ್ನು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೇಳಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, `ಸರ್ಕಾರ ಸಾರ್ವಜನಿಕರ ವಿರೋಧದ ನಡುವೆಯೂ ಈ ಸಮಾವೇಶವನ್ನು ಹಮ್ಮಿಕೊಂಡಿದೆ.
ಆದ್ದರಿಂದ ಸಮಾವೇಶ ನಡೆಯುವ ಸ್ಥಳವಾದ ತುಮಕೂರು ರಸ್ತೆಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರವನ್ನು ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು~ ಎಂದರು.
`ಸರ್ಕಾರ ನಡೆಸುತ್ತಿರುವ ಸಮಾವೇಶಗಳು ಯಶಸ್ವಿಯಾಗುವುದಿಲ್ಲ. ಹಿಂದೆ ನಡೆಸಿದ ಸಮಾವೇಶಗಳಲ್ಲಿ ನೀಡಿದ ಆಶ್ವಾಸನೆಗಳು ಇಂದಿಗೂ ಜಾರಿಯಾಗದೇ ಹಾಗೆಯೇ ಉಳಿದಿವೆ. ಆದ್ದರಿಂದ ಸರ್ಕಾರ ಈ ರೀತಿಯ ಪೊಳ್ಳು ಭರವಸೆಗಳನ್ನು ನೀಡುವುದನ್ನು ನಿಲ್ಲಿಸಲಿ~ ಎಂದು ಹೇಳಿದರು.
`ನಾವು ನೀಡುವ ತೆರಿಗೆ ಹಣವನ್ನು ಸರ್ಕಾರ ದುಂದುವೆಚ್ಚ ಮಾಡುತ್ತಿದೆ. ರೈತರ ಭೂಮಿಯನ್ನು ಸರ್ಕಾರ ಬೇಕಾಬಿಟ್ಟಿಯಂತೆ ಬಳಸಲು ಬಿಡಲಾಗುವುದಿಲ್ಲ~ ಎಂದರು.
`ಭದ್ರಾವತಿಯ ಕಬ್ಬಿಣ ಕಾರ್ಖಾನೆ, ಪೇಪರ್ ಕಾರ್ಖಾನೆ ಮತ್ತು ಮೈಸೂರಿನ ಸಕ್ಕರೆ ಕಾರ್ಖಾನೆ ಎಲ್ಲವೂ ಮುಚ್ಚಿ ಹೋಗಿವೆ. ಸ್ಥಳೀಯ ಕಾರ್ಖಾನೆಗಳನ್ನು ಮುಚ್ಚಿ, ವಿದೇಶಿ ಕಾರ್ಖಾನೆಗಳಿಗೆ ಮಣೆ ಹಾಕುತ್ತಿರುವ ಸರ್ಕಾರಕ್ಕೆ ತನ್ನನ್ನು ತಾನು ಜನತೆಯ ಸರ್ಕಾರ ಎಂದು ಕರೆದುಕೊಳ್ಳಲು ನೈತಿಕ ಹಕ್ಕಿಲ್ಲ~ ಎಂದರು.
ಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್, ಸಮತಾ ಸೈನಿಕ ದಳದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.