ಬೆಂಗಳೂರು: ಪೀಣ್ಯ ದಾಸರಹಳ್ಳಿ ಸಮೀಪ ಎಂ.ಇ.ಐ ಬಡಾವಣೆಯಲ್ಲಿ ಜೆಡಿಎಸ್ ಮಹಿಳಾ ಕಾರ್ಯಕರ್ತರು ಹಮ್ಮಿಕೊಂಡಿದ್ದ ‘ಹಸಿರೇ ಉಸಿರು’ ಜಾಗೃತಿ ಮತ್ತು ಪರಿಸರ ಸಂರಕ್ಷಣಾ ಕಾರ್ಯಕ್ರಮಕ್ಕೆ ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ ಚಾಲನೆ ನೀಡಿದರು.
100ಕ್ಕೂ ಹೆಚ್ಚು ಮಹಿಳಾ ಕಾರ್ಯಕರ್ತರು ದ್ವಿಚಕ್ರವಾಹನಗಳಲ್ಲಿ ‘ಹಸಿರ ರಕ್ಷಣೆ ನಮ್ಮೆಲ್ಲರ ಹೊಣೆ’, ‘ಹಸಿರ ನಡೆ ಉಸಿರ ಕಡೆ’, ‘ಹಚ್ಚ ಹಸಿರು ಸ್ವಚ್ಛ ಉಸಿರು’, ‘ಹಸಿರು ಬೆಳೆಸಿ ಮನುಕುಲ ಉಳಿಸಿ’, ‘ಹಸಿರು ಕ್ರಾಂತಿ ಮನುಕುಲಕ್ಕೆ ಶಾಂತಿ' ಎಂಬ ಘೋಷಣೆಗಳೊಂದಿಗೆ ಬೈಕ್ ಜಾಥ ನಡೆಸಿದರು. ಎಂಟನೇ ಮೈಲಿ, ದಾಸರಹಳ್ಳಿ ಮೆಟ್ರೋಸ್ಟೇಷನ್, ಪೈಪ್ ಲೈನ್ ರಸ್ತೆ ಮಾರ್ಗವಾಗಿ ಸಿದ್ದೇಶ್ವರ ಬಡಾವಣೆಯ ಉದ್ಯಾನದವರೆಗೆ ಜಾಥ ಸಾಗಿತು.
ಇದೇ ವೇಳೆ ಉದ್ಯಾನದಲ್ಲಿ ಮೂರು ಬಗೆಯ ಸಸಿಗಳನ್ನು ನೆಡಲಾಯಿತು. ‘ಬೆಂಗಳೂರು ಬೆಳೆದಂತೆಲ್ಲ ಮರಗಳನ್ನು ಕಡಿದು ವಿಶಾಲ ರಸ್ತೆಗಳನ್ನು, ದೊಡ್ಡ ಅಪಾರ್ಟ್ಮೆಂಟ್ ಸಮುಚ್ಚಯಗಳನ್ನು, ಕಾರ್ಖಾನೆಗಳನ್ನು, ಬಡಾವಣೆಗಳನ್ನಾಗಿ ನಿರ್ಮಿಸಲಾಗಿದೆ. ಇದರಿಂದ ನಗರದಲ್ಲಿ ಮಾಲಿನ್ಯ ಹೆಚ್ಚಾಗಿದೆ. ಅದಕ್ಕಾಗಿ ಜನರು ಮರಗಳನ್ನು ಬೆಳಸಿ, ಉಳಿಸುವ ಬಗ್ಗೆ ಗಮನ ಹರಿಸಬೇಕು’ ಎಂದು ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಅಧ್ಯಕ್ಷೆ ರಾಣಿ ಪ್ರತಾಪ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.