ಬೆಂಗಳೂರು: ‘20 ವರ್ಷಗಳ ಹಿಂದೆ ಜೆ.ಪಿ.ನಗರ ಸಮೀಪದ ದೊರೆಸಾನಿಪಾಳ್ಯಕ್ಕೆ ಮೂವತ್ತಕ್ಕೂ ಹೆಚ್ಚು ಆನೆಗಳು ಆಗಾಗ ಬರುತ್ತಿದ್ದವು’ ಎಂಬ ಸ್ವಾರಸ್ಯಕರ ಸಂಗತಿಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕೆ.ಎಸ್.ಸುಗಾರ ಹೇಳಿದರು.
ಅರಣ್ಯ ಇಲಾಖೆ ಮಂಗಳವಾರ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಅರಣ್ಯ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಸತಿ ಪ್ರದೇಶಕ್ಕೆ ಆನೆಗಳು ಬಂದರೇ ಇಂದು ದೊಡ್ಡ ಸುದ್ದಿಯಾಗುತ್ತದೆ. ಅಲ್ಲಿನ ಜನ ಆತಂಕಕ್ಕೆ ಒಳಗಾಗುತ್ತಾರೆ. ಹಿಂದೆ ದೊರೆಸಾನಿಪಾಳ್ಯಕ್ಕೆ ಆನೆಗಳು ಬರುತ್ತಿದ್ದವು. ಅವು ಮರಳಿ ಹೋಗಲು ನಗರದ ಅಂಚಿನಲ್ಲಿ ಅರಣ್ಯವಿತ್ತು. ಹಾಗಾಗಿ ಜನರಿಗೆ ತೊಂದರೆ ಅಗುತ್ತಿರಲಿಲ್ಲ’ ಎಂದರು.
‘ಆಗ ನಗರದ ಸುತ್ತ ಅರಣ್ಯದ ಪ್ರಮಾಣ ಹೆಚ್ಚಿತ್ತು. ಈಗ ಅದರ ಪ್ರಮಾಣ ತುಂಬಾ ಕುಸಿದಿದೆ. ಇಲಾಖೆ ವತಿಯಿಂದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವನ ನಿರ್ಮಿಸುತ್ತೇವೆ’ ಎಂದು ತಿಳಿಸಿದರು.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್,‘ಅರಣ್ಯದ ಮಹತ್ವ ಕುರಿತು ಸಿಬ್ಬಂದಿ ಜನರಲ್ಲಿ ಅರಿವು ಮೂಡಿಸಬೇಕು. ಅರಣ್ಯವೆಂದರೆ ಮರಗಳು ಮತ್ತು ಪ್ರಾಣಿಗಳು ಇರುವ ಪ್ರದೇಶ ಹಾಗೂ ಚಾರಣ ಹೋಗುವ ತಾಣವೆಂದು ಕೆಲವರು ಭಾವಿಸಿದ್ದಾರೆ.
ತಾಪಮಾನದ ಸಮತೋಲನದಲ್ಲಿ ಅರಣ್ಯಗಳ ಪಾತ್ರವೇನು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಕೃಷಿಭೂಮಿ ವಿಸ್ತರಣೆ ಮತ್ತು ನಗರೀಕರಣದಿಂದ ಅರಣ್ಯ ನಾಶವಾಗುತ್ತಿದೆ. ಅದರಿಂದ ಮನಷ್ಯ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷ ಏರ್ಪಡುತ್ತಿದೆ’ ಎಂದು ಹೇಳಿದರು.