ADVERTISEMENT

ತರಳಬಾಳು ಹುಣ್ಣಿಮೆ: ವಾಹನ ನಿಲುಗಡೆಗೆ ವಿಶೇಷ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 19:20 IST
Last Updated 9 ಫೆಬ್ರುವರಿ 2011, 19:20 IST

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಗುರುವಾರದಿಂದ ಒಂಬತ್ತು ದಿನಗಳ ಕಾಲ (ಫೆ.18ರವರೆಗೆ) ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ಸಮಾರಂಭಕ್ಕೆ ಬರುವ ಬಸ್ ಮತ್ತಿತರ ವಾಹನಗಳ ಸಂಚಾರಕ್ಕೆ ಮತ್ತು ನಿಲುಗಡೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ತುಮಕೂರು ರಸ್ತೆ ಹಾಗೂ ಬಳ್ಳಾರಿ ರಸ್ತೆ ಕಡೆಯಿಂದ ಸಮಾರಂಭಕ್ಕೆ ಬರುವ ಬಸ್‌ಗಳು ಮೇಖ್ರಿ ವೃತ್ತದಲ್ಲಿ ಜಯಮಹಲ್ ರಸ್ತೆಗೆ ಸಾಗಿ ಅಮಾನುಲ್ಲಾ ಗೋಡೌನ್ ಪ್ರವೇಶ ದ್ವಾರದ ಪಕ್ಕದ ಗೇಟ್ ಮೂಲಕ ಅರಮನೆ ಮೈದಾನಕ್ಕೆ ಬರಬೇಕು. ನಂತರ ಸರ್ಕಸ್ ಗ್ರೌಂಡ್ ಹಿಂಭಾಗದ ಜಾಗದಲ್ಲಿ ವಾಹನ ನಿಲ್ಲಿಸಬೇಕು.

ಸಮಾರಂಭಕ್ಕೆ ಬರುವ ಕಾರು, ಲಘು ವಾಹನಗಳು ಮೇಖ್ರಿ ವೃತ್ತದಲ್ಲಿ ರಮಣ ಮಹರ್ಷಿ ರಸ್ತೆಗೆ ಹೋಗಿ ಕೃಷ್ಣವಿಹಾರ ಎರಡನೇ ಪ್ರವೇಶ ದ್ವಾರ, ತ್ರಿಪುರ ವಾಸಿನಿ ಪ್ರವೇಶ ದ್ವಾರ ಅಥವಾ ವೈಟ್‌ಪೆಟಲ್ಸ್ ಪ್ರವೇಶ ದ್ವಾರದ ಮೂಲಕ ಅರಮನೆ ಮೈದಾನಕ್ಕೆ ಬರಬೇಕು. ಬಳಿಕ ಎಗ್ಸಿಬಿಷನ್ ವೇದಿಕೆಯ ಹಿಂಭಾಗದ ಜಾಗದಲ್ಲಿ ವಾಹನ ನಿಲುಗಡೆ ಮಾಡಬೇಕು.

ಗಣ್ಯ ಮತ್ತು ಅತಿ ಗಣ್ಯ ವ್ಯಕ್ತಿಗಳ ವಾಹನಗಳು ಕೃಷ್ಣವಿಹಾರ ಒಂದನೇ ಪ್ರವೇಶ ದ್ವಾರದ ಮೂಲಕ ಮೈದಾನದೊಳಗೆ ಬರಬೇಕು. ತರಳಬಾಳು ಮಹೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಅರಮನೆ ಮೈದಾನ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಿ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳ ಸಂಚರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.