ADVERTISEMENT

ತಾಯತ ಕಟ್ಟಿಸಿಕೊಂಡು ಬರುತ್ತಿದ್ದ ಸರಗಳ್ಳರು!

20 ಮಹಿಳೆಯರಿಂದ ಸರ ದೋಚಿದ್ದ ಇರಾನಿ ಗ್ಯಾಂಗ್

​ಪ್ರಜಾವಾಣಿ ವಾರ್ತೆ
Published 3 ಮೇ 2019, 20:38 IST
Last Updated 3 ಮೇ 2019, 20:38 IST
ಮಹಮದ್ ಅಲಿ
ಮಹಮದ್ ಅಲಿ   

ಬೆಂಗಳೂರು: ಮುಂಬೈನ ದರ್ಗಾದಲ್ಲಿ ಪೂಜೆ ಮಾಡಿಸಿದ ತಾಯತವನ್ನು ಕೈಗೆ ಕಟ್ಟಿಕೊಂಡು ವಿಮಾನದಲ್ಲಿ ನಗರಕ್ಕೆ ಬರುತ್ತಿದ್ದ ಕುಖ್ಯಾತ ‘ಇರಾನಿ ಗ್ಯಾಂಗ್‌’ ಸದಸ್ಯರಿಬ್ಬರು, ಒಂದೇ ದಿನ ಹಲವು ಮಹಿಳೆಯರಿಂದ ಚಿನ್ನದ ಸರಗಳನ್ನು ದೋಚಿ ಪರಾರಿಯಾಗುತ್ತಿದ್ದರು. ಇದೀಗ ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಾವಳಿ ನೀಡಿದ ಸುಳಿವಿನಿಂದ ವಿದ್ಯಾರಣ್ಯಪುರ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದಾರೆ.

‘ಥಾಣೆಯ ಮಹಮದ್ ಅಲಿ (23), ಸೈಯದ್ ಕರಾರ್ ಹುಸೈನ್ (37) ಎಂಬುವರನ್ನು ಬಂಧಿಸಿ, ಬೈಕ್ ಹಾಗೂ ₹ 15 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆರೋಪಿಗಳು ಇತ್ತೀಚೆಗೆ ಸಿಂಗಪುರ ಎಕ್ಸ್‌ಪ್ರೆಸ್ ಲೇಔಟ್‌ನಲ್ಲಿ ವಿಜಯಲಕ್ಷ್ಮಿ ಎಂಬುವರಿಂದ 30 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ಅಲಿ, ಸೈಯದ್ ವಿರುದ್ಧ ಮುಂಬೈ, ಕೋಲ್ಕತ್ತ, ಬೆಂಗಳೂರಿನ ಹಲವು ಠಾಣೆಗಳಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮುಂಬೈನಿಂದ ವಿಮಾನದಲ್ಲಿ ಬರುತ್ತಿದ್ದ ಆರೋಪಿಗಳು, ಇರಾನಿ ಸಮುದಾಯಕ್ಕೆ ಸೇರಿದ ಯಾವುದಾದರೊಂದು ಪ್ರಾರ್ಥನಾ ಮಂದಿರದಲ್ಲಿ ವಾಸ್ತವ್ಯ ಹೂಡುತ್ತಿದ್ದರು.

ADVERTISEMENT

ಮರುದಿನ ಬೆಳಿಗ್ಗೆ 6ರಿಂದ 1 ಗಂಟೆ ವರೆಗೆ ಪ್ರತಿಷ್ಠಿತ ರಸ್ತೆಗಳಲ್ಲಿ ಸುತ್ತಾಡಿ ಒಂಟಿ ಮಹಿಳೆಯರಿಂದ ಸರಗಳನ್ನು ದೋಚುತ್ತಿದ್ದರು. ಬಳಿಕ ಕೃತ್ಯಕ್ಕೆ ಬಳಸಿದ್ದ ಬೈಕನ್ನು ರೈಲ್ವೆ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿ, ಅದೇ ದಿನ ಮುಂಬೈಗೆ ಬಸ್ ಹತ್ತುತ್ತಿದ್ದರು.

ವರ್ಷದ ಹಿಂದೆ ಮುಂಬೈ ಪೊಲೀಸರಿಗೆ ಸಿಕ್ಕಿಬಿದ್ದು ಜೈಲುಪಾಲಾಗಿದ್ದ ಆರೋಪಿಗಳು, ಆರು ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಕೃತ್ಯಮುಂದುವರಿಸಿದ್ದರು.

ಸಂಜಯನಗರ, ಆರ್‌.ಟಿ.ನಗರ, ಸದಾಶಿವನಗರ, ಅನ್ನಪೂರ್ಣೇಶ್ವರಿ ನಗರ, ರಾಮಮೂರ್ತಿ ನಗರ, ವಿದ್ಯಾರಣ್ಯಪುರ, ಬಾಣಸ
ವಾಡಿ, ಯಲಹಂಕ ಠಾಣಾ ವ್ಯಾಪ್ತಿಯಲ್ಲಿ 20 ಮಹಿಳೆಯರಿಂದ ಸರಗಳನ್ನು ಕಿತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.