ADVERTISEMENT

ತಾಯಿ ಮಕ್ಕಳ ಮೃತ ದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 19:30 IST
Last Updated 4 ಸೆಪ್ಟೆಂಬರ್ 2011, 19:30 IST

ಯಲಹಂಕ: ಇಲ್ಲಿನ ಕೋಗಿಲು ಬಡಾವಣೆಯ ಬಂಡೆ ಪ್ರದೇಶದ ನೀರಿನ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ತಾಯಿ ಮತ್ತು ಇಬ್ಬರು ಗಂಡು ಮಕ್ಕಳ ಮೃತ ದೇಹಗಳ ಗುರುತು ಪತ್ತೆಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಅಜ್ಜಾವಾರ ಗ್ರಾಮದ ನಿವಾಸಿ ಟೆಂಪೋ ಚಾಲಕ ಶಿವ ಕುಮಾರಾಚಾರಿ ಅವರ ಪತ್ನಿ ಕಾಮಾಕ್ಷಿ(29) ಹಾಗೂ ಮಕ್ಕಳಾದ ಚೇತನ್ (5) ಹಾಗೂ ಎರಡೂವರೆ ವರ್ಷದ ಗಗನ್ ಮೃತಪಟ್ಟವರು.

ಗಣೇಶ ಹಬ್ಬಕ್ಕೆಂದು ಕೋಗಿಲು ಬಡಾವಣೆಯಲ್ಲಿರುವ ತನ್ನ ಅಕ್ಕನ ಮನೆಗೆ ಕಾಮಾಕ್ಷಿ ಮಕ್ಕಳನ್ನು ಕರೆದುಕೊಂಡು ಬಂದ್ದ್ದಿದರು. ನಂತರ ಪತಿಯೂ ಅಲ್ಲಿಗೆ ಬಂದಿದ್ದರು. ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸುವಂತೆ ಆಕೆ ತನ್ನ ಗಂಡನ ಬಳಿ ಹಠ ಹಿಡಿದಿದ್ದರು.

ಆದರೆ, ಅಂಗಡಿಯಲ್ಲಿ ಆಯ್ಕೆ ಮಾಡಿದ ಬಟ್ಟೆ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಪತಿ-ಪತ್ನಿಯರ ಮಧ್ಯೆ ಜಗಳ ನಡೆಯಿತು ಎನ್ನಲಾಗಿದೆ. ನಂತರ ಮೂವರಿಗೂ ಬಟ್ಟೆ ಕೊಡಿಸಿದ ಶಿವಕುಮಾರಾಚಾರಿ ಆ ದಿನವೇ ಊರಿಗೆ ಹೋಗಿದ್ದ.

ಹಠದ ಸ್ವಭಾದವಳಾಗಿದ್ದ ಕಾಮಾಕ್ಷಿ ಇದೇ ವಿಚಾರವಾಗಿ ಬೇಸರಗೊಂಡು, ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಕೋಗಿಲು ಬಡಾವಣೆಯ ಬಂಡೆ ಪ್ರದೇಶದ ಹೊಂಡಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ವಾಹನ ಡಿಕ್ಕಿ: ಸಾವು
ಹೊಸಕೋಟೆ: ರಸ್ತೆ ಬದಿ ನಡೆದು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಂಗಳೂರು ರಸ್ತೆಯ ಭಟ್ಟರಹಳ್ಳಿ ಬಳಿ ಶನಿವಾರ ಈ ಅಪಘಾತ ನಡೆದಿದೆ. 30 ವರ್ಷ ವಯಸ್ಸಿನ ವ್ಯಕ್ತಿ ಕಪ್ಪು ಬಣ್ಣದ ಟೀ ಶರ್ಟ್, ಪ್ಯಾಂಟ್ ಧರಿಸಿದ್ದಾನೆ.

ಶವವನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾರಸುದಾರರು ಮಾಹಿತಿಗೆ ದೂರವಾಣಿ: 28472500 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.