ADVERTISEMENT

ತುಮಕೂರು- ರಾಯದುರ್ಗ ರೈಲು ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

ಬೆಂಗಳೂರು: ತುಮಕೂರು- ರಾಯದುರ್ಗ ನಡುವಿನ ರೈಲ್ವೆ ಯೋಜನೆಗೆ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಶುಕ್ರವಾರ (ಅ.21) ಶಂಕುಸ್ಥಾಪನೆ ನೆರವೇರಿಸುವರು.

ಆಂಧ್ರಪ್ರದೇಶದ ರಾಯದುರ್ಗದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ ಅಲ್ಲಿಗೆ ತೆರಳುವುದಾಗಿ ಅವರು ಹೇಳಿದರು.

ರಾಜ್ಯದ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ಆಂಧ್ರ ಕಡೆಯಿಂದ ಕಾಮಗಾರಿ ಆರಂಭವಾಗಲು ಶಂಕುಸ್ಥಾಪನೆ ಮಾಡುತ್ತಿದ್ದು, ತುಮಕೂರು ಕಡೆಯಿಂದ ಕಾಮಗಾರಿ ಆರಂಭಿಸಲು ಸದ್ಯದಲ್ಲೇ ಚಾಲನೆ ನೀಡಲಾಗುವುದು. ಒಂದು ತಿಂಗಳಲ್ಲಿ ದಿನಾಂಕ ನಿಗದಿ ಮಾಡಿದ ನಂತರ ತುಮಕೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಒಟ್ಟು 213 ಕಿ.ಮೀ. ಉದ್ದದ ಈ ಯೋಜನೆಯನ್ನು 1000 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ತುಮಕೂರು-ಕೊರಟಗೆರೆ- ಮಧುಗಿರಿ- ಪಾವಗಡ ಮಾರ್ಗವಾಗಿ  ರಾಯದುರ್ಗ ತಲುಪಲಿದೆ.

ಈ ಯೋಜನೆಗೆ ಶೇ 50ರಷ್ಟು ಹಣವನ್ನು ರಾಜ್ಯ ಸರ್ಕಾರ ನೀಡಲಿದೆ. ಇದರ ಜತೆಗೆ ಸುಮಾರು 680 ಎಕರೆ ಭೂಮಿಯನ್ನು ಡಿಸೆಂಬರ್ ಒಳಗೆ ಹಸ್ತಾಂತರ ಮಾಡಲಾಗುವುದು ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.