ADVERTISEMENT

‘ತುಳುನಾಡಿಗರು ನ್ಯಾಯವಂತರು, ನಂಬಿಕಸ್ಥರು’

‘ತುಳುವೆರೆಂಕುಲು ಬೆಂಗಳೂರು’ ವಸಂತೋತ್ಸವ ಕಾರ್ಯಕ್ರಮದಲ್ಲಿ ಕೆ.ಪಿ.ಪುತ್ತೂರಾಯ

​ಪ್ರಜಾವಾಣಿ ವಾರ್ತೆ
Published 27 ಮೇ 2018, 19:39 IST
Last Updated 27 ಮೇ 2018, 19:39 IST
ಕಾರ್ಯಕ್ರಮದಲ್ಲಿ (ಎಡದಿಂದ) ಜಲಜಾ ಶೇಖರ್‌, ಬಿ.ರಾಮಚಂದ್ರ ಉಡುಪ, ವಿಜಯಕುಮಾರ್‌ ಕುಲಶೇಖರ್‌, ಕೆ.ಪಿ.ಪುತ್ತೂರಾಯ, ಪಿ.ಸಿ.ರಾವ್‌ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ (ಎಡದಿಂದ) ಜಲಜಾ ಶೇಖರ್‌, ಬಿ.ರಾಮಚಂದ್ರ ಉಡುಪ, ವಿಜಯಕುಮಾರ್‌ ಕುಲಶೇಖರ್‌, ಕೆ.ಪಿ.ಪುತ್ತೂರಾಯ, ಪಿ.ಸಿ.ರಾವ್‌ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಾವೆಲ್ಲಾ ತುಳು ತಾಯಿಯ ಮಕ್ಕಳು. ಬುದ್ಧಿವಂತರು, ನ್ಯಾಯವಂತರು, ನಂಬಿಕಸ್ಥರು, ಕ್ರಿಯಾಶೀಲರು ಹಾಗೂ ಹೃದಯಶೀಲರು. ಮಾನವೀಯತೆ ನಮ್ಮ ಹೆಮ್ಮೆಯ ಸಂಸ್ಕೃತಿ’ ಎಂದು ತುಲುವೆರೆಂಕುಲು ಸಂಘದ ಮಾಜಿ ಅಧ್ಯಕ್ಷ ಕೆ.ಪಿ.ಪುತ್ತೂರಾಯ ಹೇಳಿದರು.

‘ತುಳುವೆರೆಂಕುಲು ಬೆಂಗಳೂರು’ ಆಯೋಜಿಸಿದ್ದ ವಸಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತುಳುನಾಡು ಕರ್ನಾಟಕಕ್ಕೆ ಪ್ರಭಾವಳಿ ಇದ್ದಂತೆ. ತುಳು ಭಾಷೆ ಕಲ್ಲುಸಕ್ಕರೆ. ನಮ್ಮ ಸಂಸ್ಕೃತಿಗೆ ಪ್ರಪಂಚದಲ್ಲೇ ಎತ್ತರದ ಸ್ಥಾನ ಇದೆ. ವಿದ್ಯೆಯಲ್ಲಿ ನಾವು ರಾಜ್ಯದಲ್ಲಿಯೇ ಅತ್ಯುನ್ನತರು. ಇದು ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಸಾಬೀತಾಗಿದೆ. ಹಸಿದವರಿಗೆ ಅನ್ನ ಹಾಕುವುದು, ಅತಿಥಿ ಸತ್ಕಾರದಲ್ಲಿ ನಾವು ಎಂದಿಗೂ ಮುಂದೆ’ ಎಂದರು.

ADVERTISEMENT

‘ಈಗಿನ ಮಕ್ಕಳು ಕಾಲಿಗೆ ಬೀಳುವ ಬದಲು ತಬ್ಬಿಕೊಳ್ಳುತ್ತಾರೆ. ಇದು ನಮ್ಮ ಸಂಸ್ಕೃತಿ ಅಲ್ಲ. ಎಲ್ಲಿದ್ದರೂ ನಮ್ಮ ಹೃದಯವಂತಿಕೆಯನ್ನು ಮರೆಯಬಾರದು. ಬೆಂಗಳೂರಿನ ಸಹೃದಯರು ಇಲ್ಲಿದ್ದೀರಿ. ನಿಮ್ಮನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಿ, ಮನುಷ್ಯತ್ವ ಹೆಚ್ಚಿಸಿಕೊಳ್ಳಿ’ ಎಂದು ಕರೆ
ನೀಡಿದರು.

‘ಮೊದಲು ಮನುಷ್ಯನಾಗಿ. ಆನಂತರ ಡಾಕ್ಟರ್‌, ಎಂಜಿನಿಯರ್‌, ವಕೀಲರಾಗಿ. ಮನೆಗೆ ಬಂದವರನ್ನು ನಗುನಗುತ್ತಾ ಮಾತನಾಡಿಸಿ. ತುಳುನಾಡಿನವರು ಎಂದರೆ ನಗುತ್ತಾ ಇರುತ್ತಾರೆ ಎನ್ನುವುದು ಎಂದಿಗೂ ನಮ್ಮ ಅಸ್ಮಿತೆಯಾಗಿ ಉಳಿಯಬೇಕು. ಕೆಲವರ ಮನೆಗೆ ಹೋದರೆ ‘ಕಾಫಿ ಕುಡಿದು ಬಂದಿದ್ದೀರಿ ಅಲ್ವೇ? ಎನ್ನುತ್ತಾರೆ. ಇನ್ನು ಕೆಲವರು ‘ಅರ್ಧ ಕಾಫಿ ತಗೊಳಿ’ ಎನ್ನುತ್ತಾರೆ’ ಎಂದು ಹಾಸ್ಯ ಮಾಡುವ ಮೂಲಕ ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.