ADVERTISEMENT

‘ದಲಿತರ ಕಡೆಗೆ ಬಿ‌ಜೆಪಿ ನಡಿಗೆ’ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 19:56 IST
Last Updated 3 ಮಾರ್ಚ್ 2018, 19:56 IST

ಬೆಂಗಳೂರು: ದಾಸನಪುರ ಹೋಬಳಿ ಮಾಕಳಿ ಗ್ರಾಮದ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಶಾಸಕ ವಿಶ್ವನಾಥ್ ಅವರು ‘ದಲಿತರ ಕಡೆಗೆ ಬಿಜೆಪಿ ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ದಲಿತ ಸಮುದಾಯ ಎಲ್ಲಾ ವರ್ಗಗಳ ಜೊತೆ ಸ್ಪರ್ಧೆ ಎದುರಿಸುತ್ತಿದೆ. ಮೀಸಲಾತಿಯಿಂದಾಗಿ ಅವರ ಜೀವನ ಗುಣಮಟ್ಟ ಸ್ವಲ್ಪ ಸುಧಾರಿಸಿದೆ. ಈ ಸಮುದಾಯದಲ್ಲಿರುವಷ್ಟು ಜನಪದ ಗೀತೆಗಳ ಸಂಪತ್ತು, ಬೇರೆಲ್ಲೂ ಇಲ್ಲ’ ಎಂದು ಹೇಳಿದರು.

‘ದಾಸನಪುರ ಹೋಬಳಿಯಲ್ಲಿರುವ ದಲಿತ ಕೇರಿಗಳ ಅಭಿವೃದ್ದಿಗೆ ಹತ್ತು ವರ್ಷಗಳಲ್ಲಿ ಸುಮಾರು ₹65 ಕೋಟಿಗಳನ್ನು ಖರ್ಚು ಮಾಡಲಾಗಿದೆ. ಎಲ್ಲ ಕೇರಿಗಳ ರಸ್ತೆಯನ್ನು ಅಭಿವೃದ್ದಿ ಮಾಡಿದ್ದೇವೆ. ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಿದ್ದೀವಿ. ಒಂದು ಗ್ರಾಮ ಪಂಚಾಯಿತಿಗೆ ಐದರಿಂದ ಆರು ಅಂಬೇಡ್ಕರ್ ಭವನಗಳನ್ನು ನಿರ್ಮಿಸಿದ್ದು ಸಾವಿರಾರು ದಲಿತ ಮಹಿಳೆಯರಿಗೆ ಹೊಲಿಗೆ ತರಬೇತಿ ಮತ್ತು ಕಂಪ್ಯೂಟರ್ ತರಬೇತಿ ನೀಡಲಾಗಿದೆ’ ಎಂದರು.

ADVERTISEMENT

ಮಾಕಳಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತ ಲಕ್ಷ್ಮೀ, ‘ದಾಸನಪುರ ಹೋಬಳಿಯಲ್ಲಿರುವ ದಲಿತರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಇನ್ನು ಅನೇಕರಿಗೆ ಮನೆಗಳಿಲ್ಲ. ಮುಂದಿನ ದಿನಗಳಲ್ಲಿ ಅವರಿಗೂ ವಸತಿ ಸೌಲಭ್ಯ ಕಲ್ಪಿಸಬೇಕಿದೆ’ ಎಂದರು.

‘361 ಬೂತ್‍ನಲ್ಲಿನ ದಲಿತರ ಎಲ್ಲಾ ಮನೆಗಳಿಗೆ ನಮ್ಮ ಕಾರ್ಯಕರ್ತರು ಭೇಟಿ ನೀಡುತ್ತಾರೆ. ಅಲ್ಲಿನ ಸಮಸ್ಯೆಗಳನ್ನು ದಾಖಲಿಸಿಕೊಂಡು ಶಾಸಕರಿಗೆ ವರದಿ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಯೋಜನೆಗಳನ್ನು ಇಂದೇ ತಯಾರಿಸಿಕೊಳ್ಳಲು ಅದು ಸಹಕಾರಿಯಾಗಲಿದೆ’ ಎಂದು ಹೆಸರಘಟ್ಟ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಬಿ.ಕೃಷ್ಣಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.