ಬೆಂಗಳೂರು: ನಗರದ ಕೇಂದ್ರ, ದಕ್ಷಿಣ ಮತ್ತು ಪಶ್ಚಿಮ ವಿಭಾಗದ ಪೊಲೀಸರು ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿನ ರೌಡಿಗಳು ಹಾಗೂ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಮನೆಗಳ ಮೇಲೆ ಸೋಮವಾರ ನಸುಕಿನಲ್ಲಿ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದರು.
47 ಠಾಣೆಗಳ ವ್ಯಾಪ್ತಿಯ ಸುಮಾರು 552 ರೌಡಿಗಳ ಮನೆಗಳ ಮೇಲೆ ಬೆಳಗಿನ ಜಾವ ದಾಳಿ ನಡೆಸಿದ ಪೊಲೀಸರು ಮೂರು ತಾಸಿಗೂ ಹೆಚ್ಚು ಕಾಲ ತಪಾಸಣೆ ಮಾಡಿದರು. ಈ ವೇಳೆ ಕೆಲ ರೌಡಿಗಳ ಮನೆಗಳಲ್ಲಿ ಪತ್ತೆಯಾದ ಮಾರಕಾಸ್ತ್ರಗಳನ್ನು ಸಿಬ್ಬಂದಿ ವಶಪಡಿಸಿಕೊಂಡರು.
ನಂತರ ರೌಡಿಗಳನ್ನು ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಿದ ಪೊಲೀಸರು, ಅವರ ಪೂರ್ವಾಪರ ಹಾಗೂ ಅಪರಾಧ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ಕೆಲ ರೌಡಿಗಳ ವಿರುದ್ಧ ಭದ್ರತಾ ಕಾಯ್ದೆಯಡಿ ಪ್ರಕರಣ ಸಹ ದಾಖಲಿಸಿದರು.
`ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಯಾವುದೇ ಮುನ್ಸೂಚನೆ ನೀಡದೆ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಲಾಯಿತು. ಹಲವು ರೌಡಿಗಳನ್ನು ಠಾಣೆಗೆ ಕರೆತಂದು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿ ವಾಪಸ್ ಕಳುಹಿಸಲಾಯಿತು' ಎಂದು ಕೇಂದ್ರ ವಿಭಾಗದ ಡಿಸಿಪಿ ಬಿ.ಆರ್.ರವಿಕಾಂತೇಗೌಡ `ಪ್ರಜಾವಾಣಿ'ಗೆ ತಿಳಿಸಿದರು.
ಕೊರಂಗು ಕೃಷ್ಣನ ಸಹಚರರು, ಅರಸಯ್ಯ, ಗಾಳಪ್ಪ. ಅಪ್ಪು, ಸಲೀಂ, ಮುರುಗೇಶ್, ಕಬೀರ್, ಕಿಟ್ಟಿ, ಮೋಹನ, ತಿರುಮಲ, ರಾಘವೇಂದ್ರ, ಪೂರ್ಣೇಶ್, ಜಯರಾಮ, ಕೃಷ್ಣ, ತಿಮ್ಮ, ರಾಮ, ಬಡ್ಡಿ ಹೇಮಂತ, ರವಿ, ವಜ್ರಕುಮಾರ, ಶ್ರೇಯಸ್, ಗಜೇಂದ್ರ, ಮುನಿರಾಜ ಸೇರಿದಂತೆ ಹಲವು ರೌಡಿಗಳ ಮನೆಗಳಲ್ಲಿ ತಪಾಸಣೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.