ಬೆಂಗಳೂರು: 108 ಪುಣ್ಯಸಾಗರ ಮಹಾರಾಜರ ಚಾತುರ್ಮಾಸ ಸಮಿತಿಯು ಜಯನಗರದ ಚಕ್ರೇಶ್ವರಿ ಮಹಿಳಾ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 108 ಪುಣ್ಯಸಾಗರ ಮಹಾರಾಜ ಸ್ವಾಮೀಜಿ ಅವರು ಕೇಶಲೋಚ ಮಾಡಿಕೊಂಡರು.
ದಿಗಂಬರ ಮುನಿಗಳು ಸಾಮಾನ್ಯವಾಗಿ ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಕೇಶಲೋಚ (ಗಡ್ಡ, ಮೀಸೆ ಹಾಗೂ ತಲೆಗೂದಲು) ಮಾಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಕೈಗಳಿಂದಲೇ ಕೂದಲನ್ನು ಕಿತ್ತುಕೊಳ್ಳುತ್ತಾರೆ.
ಶರೀರ ಸೌಂದರ್ಯಕ್ಕೆ ಕೇಶವೂ ಕಾರಣ. ಮುನಿಗಳು ಎಲ್ಲ ಶೃಂಗಾರಗಳಿಂದ ರಹಿತರಾಗಿರುತ್ತಾರೆ. ಈ ಕಾರಣದಿಂದ ಕೇಶಲೋಚ ಮಾಡಿಕೊಳ್ಳುತ್ತಾರೆ.
ಜೈನ ಮುನಿಗಳು ಹಿಂಸಾ ಸಾಧನಗಳಾದ ಕತ್ತರಿ, ರೇಜರ್, ಬ್ಲೇಡ್ ಮತ್ತಿತರ ಸಾಮಗ್ರಿಗಳನ್ನು ಯಾವತ್ತೂ ಉಪಯೋಗಿಸುವುದಿಲ್ಲ. ಹೀಗಾಗಿ, ಸ್ವತಃ ಕೈಗಳಿಂದ ಕೇಶಲೋಚ ಮಾಡಿಕೊಳ್ಳುತ್ತಾರೆ. `ಜೈನ ಮುನಿಗಳು ಸಾಮಾನ್ಯವಾಗಿ ನಾಲ್ಕು ಕೊಠಡಿಗಳ ನಡುವೆ ಕೇಶಲೋಚ ಮಾಡಿಕೊಳ್ಳುತ್ತಾರೆ. ಮುನಿಗಳ ಜೀವನಶೈಲಿ ಹಾಗೂ ತ್ಯಾಗ ಮನೋಭಾವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಬಾರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು~ ಎಂದು ಕಾರ್ಯಕ್ರಮದ ಸಂಯೋಜಕ ಡಿ. ಶಶಿಕುಮಾರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.