ADVERTISEMENT

ದೆಹಲಿ ಕರ್ನಾಟಕ ಭವನ: ನೇಮಕಾತಿ ಅಕ್ರಮ ತನಿಖೆಗೆ ಸಿ.ಎಂ ಆದೇಶ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2014, 19:53 IST
Last Updated 16 ಅಕ್ಟೋಬರ್ 2014, 19:53 IST

ಬೆಂಗಳೂರು: ದೆಹಲಿ ಕರ್ನಾಟಕ ಭವನದ ‘ಡಿ ಗ್ರೂಪ್‌’ ನೌಕರರ ನೇಮ­ಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹದಿನಾಲ್ಕು ವರ್ಷಗಳ ಬಳಿಕ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ. ಈ ಪ್ರಕರಣ ಕುರಿತು ಸಮಗ್ರ ವಿಚಾರಣೆ ನಡೆಸಿ ವರದಿ ಕಳುಹಿಸಬೇಕೆಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.

ಕರ್ನಾಟಕ ಭವನ ರಾಜ್ಯ ಸರ್ಕಾರದ ಅನುಮೋದನೆ ಪಡೆಯದೆ ಒಂಬತ್ತು ಮಂದಿ ಡಿ ಗ್ರೂಪ್‌ ನೌಕರರನ್ನು 1999ರಲ್ಲಿ ನೇರವಾಗಿ ನೇಮಕಾತಿ ಮಾಡಿಕೊಂಡಿದೆ. ಈ ಪೈಕಿ ಮೂವರು ಐದು ವರ್ಷದ ಬಳಿಕ ರಾಜೀನಾಮೆ ನೀಡಿದ್ದಾರೆ. ಉಳಿದ ಆರು ಮಂದಿಗೆ ಕ್ಲರ್ಕ್‌ ಹಾಗೂ ಟೈಪಿಸ್ಟ್‌ ಹುದ್ದೆಗೆ ಬಡ್ತಿ ನೀಡಲಾಗಿದ್ದು, ಸೇವಾ ಹಿರಿತನದ ಪಟ್ಟಿಯಲ್ಲಿ ಇಡಲಾಗಿದೆ.

ಡಿ ಗ್ರೂಪ್‌ ನೌಕರರ ನೇಮಕಾತಿ ಅಕ್ರಮಗಳನ್ನು ಪತ್ತೆ ಹಚ್ಚಿರುವ ಕರ್ನಾಟಕ ಭವನದ ಕೆಲವು ನೌಕರರು ದಾಖಲೆಗಳನ್ನು ಕಲೆ ಹಾಕಿ ರಾಜ್ಯ ಸರ್ಕಾರಿ ನೌಕರರ ಸಂಘದ ಗಮನಕ್ಕೆ ತಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್‌. ಬೈರಪ್ಪ ಅಕ್ರಮ ನೇಮಕಾತಿ ಕುರಿತು ದೂರು ನೀಡಿದ್ದು, ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ದೆಹಲಿ ಕರ್ನಾಟಕ ಭವನದಲ್ಲಿ ಎರಡು ಪ್ರತ್ಯೇಕ ಆಡಳಿತ ವಿಭಾಗಗಳಿವೆ. ಮೊದಲನೆಯದು ಕರ್ನಾಟಕ ಭವನ. ಎರಡನೇ­ಯದು ‘ನಿವಾಸಿ ಕಮಿಷನರ್‌’ ಅವರ ಕಚೇರಿ. ಇವೆರಡೂ ವಿಭಾಗಗಳ ನಡುವೆ ನೌಕರರನ್ನು ಎರವಲು ಸೇವೆ ಮೇಲೆ ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ಕರ್ನಾಟಕ ಭವನಕ್ಕೆ ನೇಮಕ ಮಾಡಿಕೊಂಡ ಆರು ಡಿ ಗ್ರೂಪ್‌ ನೌಕರರನ್ನು ನಿವಾಸಿ ಕಮಿಷನರ್‌ ಕಚೇರಿಗೆ ನಿಯೋಜಿಸಿ ಅಲ್ಲೇ ಕಾಯಂ ಮಾಡಿ ಕ್ಲರ್ಕ್‌ ಮತ್ತು ಟೈಪಿಸ್ಟ್‌ ಹುದ್ದೆಗೆ ಬಡ್ತಿ ನೀಡಲಾಗಿದೆ. ಅದಕ್ಕೆ ಅವಕಾಶ ಇಲ್ಲದಿರುವುದರಿಂದ ಅದೂ ಅಕ್ರಮ ಎಂದು ಆರೋಪಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೈರಪ್ಪ ಸಲ್ಲಿಸಿ­ರುವ ದೂರಿನಲ್ಲಿ ಕರ್ನಾಟಕ ಭವನದ ಹಿರಿಯ ಅಧಿಕಾರಿಗಳು ಮಾಡಿದ್ದಾರೆನ್ನಲಾದ ಅಕ್ರಮ ನೇಮಕಾತಿ ಮತ್ತು ಬಡ್ತಿಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ವಿವರಿಸಿದ್ದಾರೆ.

ನೌಕರರ ಸಂಘದ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ, ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಗೆ ಪ್ರಕರಣ ಕುರಿತು ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ. ನಿವಾಸಿ ಕಮಿಷನರ್‌ ಅವರಿಗೆ ಪತ್ರ ಬರೆದು ವರದಿ ಕಳುಹಿಸುವಂತೆ ಡಿಪಿಆರ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಕೇಳಿದ್ದಾರೆ.

ಕರ್ನಾಟಕ ಭವನ ಹಾಗೂ ನಿವಾಸಿ ಕಮಿಷನರ್‌ ಕಚೇರಿಯಲ್ಲಿ ನಡೆಯುವ ನೇಮಕಾತಿಗೆ ರಾಜ್ಯ ಸರ್ಕಾರದ ಅನುಮೋದನೆ ಇರಬೇಕು. ನೇಮಕಾತಿ ನಿಯಮದ ಪ್ರಕಾರ ಪಾರದರ್ಶಕ ನೀತಿ ಕಾಪಾಡಿಕೊಳ್ಳಬೇಕು ಎಂದು ಮುಖ್ಯ­ಮಂತ್ರಿ ಆದೇಶಿಸಿದ್ದಾರೆ. ಮುಖ್ಯಮಂತ್ರಿ ಆದೇಶದ ಬಳಿಕ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ ಎರಡು ಪತ್ರಗಳನ್ನು ನಿವಾಸಿ ಕಮಿಷನರ್‌ ಅವರಿಗೆ ಬರೆದಿದೆ. ಮೊದಲ ಪತ್ರ ಜುಲೈ 3ರಂದು ರವಾನೆಯಾಗಿದೆ. ಎರಡನೇ ಪತ್ರ ಸೆಪ್ಟೆಂಬರ್‌ 6ರಂದು ಕಳುಹಿಸಲಾಗಿದೆ.

ರಾಜ್ಯ ಸರ್ಕಾರದಿಂದ ಬಂದಿರುವ ಎರಡನೇ ಪತ್ರದಲ್ಲಿ ಕರ್ನಾಟಕ ಭವನದ ಅಕ್ರಮ ನೇಮಕಾತಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ವಿಳಂಬ ಮಾಡದೆ ತಕ್ಷಣ ವರದಿ ಕಳುಹಿಸುವಂತೆ ನಿರ್ದೇಶಿಸಲಾಗಿದೆ. ಮುಖ್ಯಮಂತ್ರಿ ಆದೇಶ ಮಾಡಿ ಮೂರು ತಿಂಗಳು ಕಳೆದರೂ ದೆಹಲಿ ಕರ್ನಾಟಕ ಭವನದ ಹಿರಿಯ ಅಧಿಕಾರಿಗಳು ಈ ಪ್ರಕರಣ ಕುರಿತು ವರದಿ ಕಳುಹಿಸಿಲ್ಲ. ಡಿ ಗ್ರೂಪ್‌ ನೌಕರರ ನೇಮಕಾತಿ ಮತ್ತು ಬಡ್ತಿಗೆ ಸಂಬಂಧಿಸಿದ ದಾಖಲೆಗಳು ಕಣ್ಮರೆಯಾಗಿವೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಸಚಿವಾಲಯದ ಉನ್ನತ ಮೂಲಗಳು ಖಚಿತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.