ಬೆಂಗಳೂರು: ‘ಸಂಗೀತ ಕ್ಷೇತ್ರಕ್ಕೆ ಅಪರಿಮಿತ ಕೊಡುಗೆ ನೀಡಿರುವ ವೈಣಿಕಶ್ರೇಷ್ಠ ಮೈಸೂರು ವಿ.ದೊರೆಸ್ವಾಮಿ ಅಯ್ಯಂಗಾರ್ ಅವರ ಭಾವಚಿತ್ರವಿರುವ ಅಂಚೆಚೀಟಿಯನ್ನು ಹೊರತರಬೇಕು’ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಒತ್ತಾಯಿಸಿದರು.
ವೀಣಾ ದೊರೆಸ್ವಾಮಿ ಅಯ್ಯಂಗಾರ್ ಮೆಮೊರಿಯಲ್ ಟ್ರಸ್ಟ್ ಶನಿವಾರ ನಗರದಲ್ಲಿ ಆಯೋಜಿಸಿದ್ದ ಮೈಸೂರು ವಿ.ದೊರೆಸ್ವಾಮಿ ಅಯ್ಯಂಗಾರ್ ಅವರ ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೊರೆಸ್ವಾಮಿ ಅವರು ಶ್ರೇಷ್ಠ ಕಲಾವಿದರಷ್ಟೇ ಅಲ್ಲ, ಮಹಾನ್ ಮಾನವತಾವಾದಿಯಾಗಿದ್ದರು. ವೀಣಾವಾದನ ಕಲಿಯುವವರಿಗೆ ಅವರು ಎಲ್ಲ ಕಾಲಕ್ಕೂ ಗುರು ಎನಿಸಿದ್ದಾರೆ. ಸಂಗೀತ ಕ್ಷೇತ್ರಕ್ಕೆ ನೀಡಿದ ಅವರ ಕೊಡುಗೆ ಅನನ್ಯ. ದೆಹಲಿಯಲ್ಲಿ ನಡೆದ ಅವರ ವೀಣಾವಾದನ ಕಛೇರಿಯನ್ನು ಅಂದಿನ ರಾಷ್ಟ್ರಪತಿ ವಿ.ವಿ.ಗಿರಿಯವರು ನೆಲಹಾಸಿನ ಮೇಲೆ ಕುಳಿತು ಆಲಿಸಿದ್ದರು’ ಎಂದು ಸ್ಮರಿಸಿದರು.
ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಅರವಿಂದ್ ವರ್ಮಾ, ‘ದೊರೆಸ್ವಾಮಿ ಅವರು 13ನೇ ವಯಸ್ಸಿನಲ್ಲೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದರು. ಆರು ದಶಕಗಳ ಕಾಲ ಸಂಗೀತ ರಸಿಕರನ್ನು ಮಂತ್ರಮುಗ್ಧಗೊಳಿಸಿದ್ದರು. ಅಂಚೆ ಇಲಾಖೆ ಅವರ ಸ್ಮರಣಾರ್ಥ 2,500 ವಿಶೇಷ ಅಂಚೆ ಲಕೋಟೆ ತಂದಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.