ADVERTISEMENT

ಧರಣಿ ಕೈಬಿಟ್ಟ ರಾಜ್ಯ ಪೌರ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 19:25 IST
Last Updated 19 ಏಪ್ರಿಲ್ 2012, 19:25 IST

ಬೆಂಗಳೂರು: ಪೌರ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಿಸಿ ಸರ್ಕಾರವು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಗುರುವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಮಹಾ ಸಂಘವು ಧರಣಿ ಸತ್ಯಾಗ್ರಹವನ್ನು ಕೈಬಿಟ್ಟಿದೆ.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಗುರುವಾರ ನಿಡುಮಾಮಿಡಿ ಸಂಸ್ಥಾನದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಅವರ ನೇತೃತ್ವದಲ್ಲಿ ಧರಣಿ ಆರಂಭಗೊಂಡಿತ್ತು.

`ರಾಜ್ಯದ ಪೌರ ಕಾರ್ಮಿಕರಿಗೆ ಮಾಸಿಕ 6,600 ರೂಪಾಯಿ ಕನಿಷ್ಠ ವೇತನ ಹಾಗೂ ಬಿಬಿಎಂಪಿಯಲ್ಲಿರುವ ನಾಲ್ಕು ಸಾವಿರ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು. ಪೌರ ಕಾರ್ಮಿಕರಿಗೂ ಆರೋಗ್ಯ ವಿಮೆ ಸೇರಿದಂತೆ ಸರ್ಕಾರಿ ನೌಕರರಿಗೆ ನೀಡಲಾಗುವ ಸೌಕರ್ಯಗಳನ್ನು ನೀಡಬೇಕು~ ಎಂದು ಒತ್ತಾಯಿಸಿ ಧರಣಿ ಆರಂಭಿಸಲಾಗಿತ್ತು.

ಗುರುವಾರ ಮಧ್ಯಾಹ್ನ ಪ್ರತಿಭಟನಾ ಸ್ಥಳಕ್ಕೆ ಬಂದ ಕಾನೂನು ಸಚಿವ ಎಸ್.ಸುರೇಶ್ ಕುಮಾರ್ ಪೌರ ಕಾರ್ಮಿಕರ ಬೇಡಿಕೆಗಳ ಈಡೇರಿಕೆಯ ಭರವಸೆ ನೀಡಿದರು. ಕಾರ್ಮಿಕ ಇಲಾಖೆಯ ಆದೇಶದಂತೆ ಇದೇ ತಿಂಗಳ ಆರಂಭದಿಂದ ಅನ್ವಯವಾಗುವಂತೆ ವೇತನವನ್ನು 5,850 ರೂಪಾಯಗಳಿಗೆ ಏರಿಸುವ ಆದೇಶದ ಪ್ರತಿಯನ್ನು ಉಪವಾಸ ನಿರತ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಅವರಿಗೆ ನೀಡಿದರು.

`ರಾಜ್ಯದ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸಿದ್ಧವಿದೆ. ಪೌರ ಕಾರ್ಮಿಕರ ಕನಿಷ್ಠ ವೇತನಕ್ಕೆ ಆದೇಶಿಸಲಾಗಿದ್ದು, ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಶೀಘ್ರದಲ್ಲೇ ಕ್ರಮ ಕೈ ಗೊಳ್ಳಲಾಗುವುದು~ ಎಂದು ಎಸ್.ಸುರೇಶ್‌ಕುಮಾರ್ ಹೇಳಿದರು.

`ಬೇಡಿಕೆ ಈಡೇರಿಸಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇವೆ. ಪೌರ ಕಾರ್ಮಿಕರ ಬೇಡಿಕೆಗೆ ಸರ್ಕಾರ ಸ್ಪಂದಿಸಿರುವುದರಿಂದ ರಾಜ್ಯಾದ್ಯಂತ ಕರೆ ನೀಡಿದ್ದ ಪೌರ ಕಾರ್ಮಿಕರ ಮುಷ್ಕರವನ್ನು ಹಿಂಪಡೆಯಲಾಗಿದೆ~ ಎಂದು ಸಂಘದ ಮಹಾ ಪ್ರಧಾನ ಕಾರ್ಯದರ್ಶಿ ಎ.ಜೈರಿಮ್ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.