ಬೆಂಗಳೂರು: ನಗರದಲ್ಲಿ ಶುಕ್ರವಾರ ಮಧ್ಯಾಹ್ನದ ಬಳಿಕ ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ. ಬಹುತೇಕ ಎಲ್ಲ ಪ್ರದೇಶಗಳಲ್ಲೂ ಮಳೆಯಾಗಿದೆ. ಸುಮಾರು 21 ಮಿಲಿಮೀಟರ್ ಮಳೆ ಪ್ರಮಾಣ ದಾಖಲಾಗಿದೆ. ತಂಪು ಹವೆ, ಮೋಡ ಕವಿದ ವಾತಾವರಣವಿದೆ.
ಮಧ್ಯಾಹ್ನ 1.30ರ ಸುಮಾರಿಗೆ ಆರಂಭವಾದ ಮಳೆ ಸಂಜೆವರೆಗೂ ಮುಂದುವರಿದಿದೆ. ಮಳೆಯ ಅಬ್ಬರಕ್ಕೆ ಕೆಲವೆಡೆ ರಸ್ತೆಯ ಮೇಲೆ ನೀರು ಹರಿದು ಸಂಚಾರಕ್ಕೆ ತೊಂದರೆಯಾಯಿತು.
ವಿವಿಧ ಪ್ರದೇಶಗಳಲ್ಲಿ 6 ಮರಗಳು ಧರೆಗುರುಳಿವೆ. ಶಂಕರಮಠ, ನೀಲಸಂದ್ರ, ಮಲ್ಲೇಶ್ವರ, ಕಲ್ಯಾಣನಗರ, ವಿಲ್ಸನ್ ಗಾರ್ಡನ್, ಲೋಕೋಪಯೋಗಿ ಇಲಾಖೆ ವಸತಿ ಗೃಹಗಳ ಪ್ರದೇಶದಲ್ಲಿ ತಲಾ ಒಂದೊಂದು ಮರಗಳು ಉರುಳಿಬಿದ್ದಿವೆ.
ಮಳೆ ಹಾನಿ ಸಂಬಂಧಿಸಿ ಬಿಬಿಎಂಪಿ ಕಚೇರಿಗೆ ಸುಮಾರು 60 ಕರೆಗಳು ಬಂದಿವೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.