ADVERTISEMENT

ನಗರದ ಆಸ್ಪತ್ರೆಯಲ್ಲಿ ಸಂತಾನ ಫಲ ಕೇಂದ್ರ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಬೆಂಗಳೂರು: ನಗರದ ಹೆಬ್ಬಾಳದ ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅತ್ಯುನ್ನತ ತಂತ್ರಜ್ಞಾನದ ಸೌಲಭ್ಯದ ಸಂತಾನ ಫಲ ಕೇಂದ್ರವು ಜ. 14ರಂದು ಉದ್ಘಾಟನೆಗೊಳ್ಳಲಿದೆ. 

 ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಸ್ಪತ್ರೆಯ ಸಂತಾನ ಫಲ ಚಿಕಿತ್ಸಾ ಕೇಂದ್ರದ ಮುಖ್ಯಸ್ಥ ಡಾ. ಜಾರ್ಜ್ ಕೊರುಲಾ, ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ವೈದ್ಯಕೀಯ ಮಂಡಳಿಯ ಮುಖ್ಯಸ್ಥ ಡಾ.ಕೆ.ಕೆ.ತಲ್ವಾರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಆಡಳಿತ ಮಂಡಳಿಯ ಮುಖ್ಯಸ್ಥ ಡಾ.ಸುರಂಜನ್ ಭಟ್ಟಾಚಾರ್ಜಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸಂತಾನಹೀನತೆ ತೊಂದರೆಯು ಶೇ 10ರಿಂದ 15ರಷ್ಟು ಜನಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತದೆ. ಜೀವಕ್ಕೆ ಅಪಾಯ ಉಂಟು ಮಾಡದ ಈ ತೊಂದರೆಗೆ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ನೀಡುವ ಸೌಲಭ್ಯಗಳು ಸೀಮಿತವಾಗಿವೆ. ಸಂತಾನ ಹೀನತೆಯಿಂದ  ಸಮಾಜದಿಂದ ಅನುಭವಿಸುವ ಮಾನಸಿಕ ತೊಂದರೆಗೆ ದಂಪತಿಗಳು ಒಳಗಾಗುತ್ತಾರೆ. ಈ ಸಾಮಾಜಿಕ, ಮಾನಸಿಕ ಸಮಸ್ಯೆಗಳನ್ನು ಗುರುತಿಸಿ ಆಸ್ಪತ್ರೆಯು ಸಲಹಾ ಸೇವೆಗಳನ್ನು ನೀಡುತ್ತಿದೆ ಅವರು ತಿಳಿಸಿದರು.

ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿನ ಬೋಧಕ ವರ್ಗವು ಸಂತಾನ ಸಮಸ್ಯೆ ಬಗೆಹರಿಸುವಲ್ಲಿ ಪರಿಪೂರ್ಣ ರೀತಿಯಲ್ಲಿ ಆರೋಗ್ಯ ರಕ್ಷಣೆ ನೀಡುತ್ತಿದೆ. ಸರ್ಕಾರ ನೀಡುತ್ತಿರುವ ಸೌಲಭ್ಯ ತುಂಬಾ ಸೀಮಿತವಾಗಿದೆ. ಸಂಕೀರ್ಣ ಸಮಸ್ಯೆಗಳನ್ನು ಪರಿಶೀಲಿಸಿ ವ್ಯಕ್ತಿಗತವಾಗಿ ಅತ್ಯುತ್ತಮ ರೀತಿಯ ಪರಿಹಾರಗಳನ್ನು ಕಲ್ಪಿಸುವ ಉದ್ದೇಶಕ್ಕಾಗಿ ಆಸ್ಪತ್ರೆಯು ಸ್ವತಂತ್ರ ನೈತಿಕ ಸಮಿತಿಯನ್ನು ಹೊಂದಿದೆ. ಈ ಸೌಲಭ್ಯಗಳನ್ನು ವೈದ್ಯಕೀಯ ಬೋಧಕ ಸಂಸ್ಥೆಗಳೂ ಹೊಂದಿಲ್ಲ ಎಂದರು.

ದುರದೃಷ್ಟವಶಾತ್ ವಿಮಾ ಕ್ಷೇತ್ರದಿಂದ ಬೆಂಬಲ ಸಿಗದ ಈ ವಿಭಾಗಕ್ಕೆ ಅತ್ಯಧಿಕ ವೆಚ್ಚವನ್ನು ಭರಿಸಬೇಕಾಗಿರುವುದು ಅನಿವಾರ್ಯ. ಹಾಗಾಗಿ ಬ್ಯಾಪ್ಟಿಸ್ಟ್ ಆಸ್ಪತ್ರೆಯು ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ಸಮಾಜದ ವಿವಿಧ ವರ್ಗಗಳಿಗೆ ಸೇರಿದ ದಂಪತಿಗಳಿಗೆ ಕಲ್ಪಿಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.