ಬೆಂಗಳೂರು: ನಗರದಲ್ಲಿ ದೀಪಾವಳಿ ಹಬ್ಬದ ವೇಳೆ ಹೆಚ್ಚುವರಿಯಾಗಿ ಶೇ 20ರಷ್ಟು ಕಸ ಉತ್ಪತ್ತಿಯಾಗಿದೆ.
‘ಪ್ರತಿದಿನ 4,000 ಟನ್ ಕಸ ಉತ್ಪತ್ತಿಯಾಗುತ್ತದೆ. ಇದರಲ್ಲಿ ಸುಮಾರು 2,000 ಟನ್ ಹಸಿಕಸ ಇರುತ್ತದೆ. ಹಬ್ಬದ ಪ್ರಯುಕ್ತ ಹೆಚ್ಚುವರಿಯಾಗಿ 300ರಿಂದ 400 ಟನ್ ಹಸಿಕಸ ಸಂಗ್ರಹಗೊಂಡಿದೆ. ಒಣಕಸ ಹೆಚ್ಚುವರಿಯಾಗಿ 300 ಟನ್ ಉತ್ಪತ್ತಿಯಾಗಿದೆ’ ಎಂದು ಬಿಬಿಎಂಪಿ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್ ಖಾನ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆಯುಧ ಪೂಜೆಗೆ ಹೋಲಿಸಿದರೆ ಈ ಹಬ್ಬದಲ್ಲಿ ಹೆಚ್ಚಿನ ಕಸ ಸಂಗ್ರಹ ಆಗುವುದಿಲ್ಲ. ಬೂದುಗುಂಬಳಕಾಯಿ, ಹೂವು, ಪೂಜಾ ಸಾಮಗ್ರಿ ಹಾಗೂ ಪಟಾಕಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಬೂದುಗುಂಬಳಕಾಯಿ 15 ದಿನಗಳಲ್ಲಿ ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಆದರೆ, ಬಾಳೆ ದಿಂಡು ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆ’ ಎಂದರು.
‘ಪಟಾಕಿಗೆ ಬಳಸುವ ಕೆಲ ವಸ್ತುಗಳಿಗೆ ಬೆಲೆ ಜಾಸ್ತಿ. ಚಿಂದಿ ಆಯುವವರು ಇವುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಉಳಿದ ತ್ಯಾಜ್ಯವನ್ನು ಪೌರಕಾರ್ಮಿಕರು ತೆರವುಗೊಳಿಸುತ್ತಾರೆ’ ಎಂದು ಹೇಳಿದರು.
‘ಬುಧವಾರ ನರಕ ಚತುರ್ಥಿ ಇತ್ತು. ಅಂದು ಹೆಚ್ಚಿನ ಪಟಾಕಿ ಹೊಡೆದಿಲ್ಲ. ಶುಕ್ರವಾರ ಬಲಿಪಾಡ್ಯಮಿ ಇದ್ದು, ಜನರು ಹೆಚ್ಚಿನ ಪಟಾಕಿ ಸಿಡಿಸುವ ಸಾಧ್ಯತೆ ಇದೆ. ಇದರಿಂದ ಮತ್ತಷ್ಟು ಕಸ ಸಂಗ್ರಹಗೊಳ್ಳಲಿದೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.