
ಬೆಂಗಳೂರು: ನಟ, ವಸತಿ ಸಚಿವ ಅಂಬರೀಷ್ ಅವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಸಹಜ ಸ್ಥಿತಿಗೆ ಮರುಳುತ್ತಿದ್ದಾರೆ.
ಈ ಬಗ್ಗೆ ಮಂಗಳವಾರ ಮಾಹಿತಿ ನೀಡಿದ ವಿಕ್ರಂ ಆಸ್ಪತ್ರೆಯ ವೈದ್ಯ ಡಾ.ರವೀಶ್, ‘ಆರೋಗ್ಯದಲ್ಲಿ ಗಣನೀಯವಾಗಿ ಚೇತರಿಕೆ ಕಂಡುಬಂದಿದೆ. ಮಂಪರು ಔಷಧಿ ಪ್ರಮಾಣ ಕಡಿಮೆ ಮಾಡಲಾಗಿದೆ’ ಎಂದು ತಿಳಿಸಿದರು.
‘ರಕ್ತದಲ್ಲಿನ ಕ್ರಿಯಾಟಿನ್ ಅಂಶವು 1.4 ಮಿ.ಗ್ರಾಂ ಗೆ ಇಳಿದಿದ್ದು, 1.3 ಮಿ.ಗ್ರಾಂ ಬಂದರೆ ಸಾಮಾನ್ಯ ಸ್ಥಿತಿಯನ್ನು ತಲುಪಲಿದೆ. ಇದರಿಂದ ಮೂತ್ರಪಿಂಡಗಳ ಕಾರ್ಯನಿರ್ವಹಣೆ ಸರಾಗವಾಗಲಿದೆ. ಇನ್ನೂ 24 ಗಂಟೆಗಳ ಒಳಗೆ ಕೃತಕ ಉಸಿರಾಟ ಸಾಧನವನ್ನು ತೆಗೆಯಲು ನಿರ್ಧರಿಸಿದ್ದೇವೆ’ ಎಂದರು. ಅರಿವಳಿಕೆ ತಜ್ಞ ಡಾ.ಅಜಯ್ರಾವ್, ‘ಆರೋಗ್ಯ ಸುಧಾರಣೆಯಾದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಸಮಾಧಾನ ವ್ಯಕ್ತಪಡಿಸಿದ್ದಾರೆ’ ಎಂದರು.
ಗಣ್ಯರ ದಂಡು: ವಿಧಾನಸಭೆಯ ಅಧ್ಯಕ್ಷ ಕಾಗೋಡು ತಿಮ್ಮಪ್ಪ, ನಟಿ ಮಾಲಾಶ್ರೀ, ನಿರ್ಮಾಪಕ ರಾಮು, ನಟ ದಿಗಂತ್, ಶಾಸಕ ಪುಟ್ಟಣ್ಣಯ್ಯ, ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್, ಸಿ.ಪಿ.ಯೋಗೀಶ್ವರ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆಸ್ಪತ್ರೆಗೆ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.