ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಮುಂಬೈನ ರೂಪದರ್ಶಿಗೆ ವಂಚಿಸಿದ್ದ ಆರೋಪದಡಿ ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದ ಕಿರುತೆರೆ ನಟ ಕಿರಣ್ ರಾಜ್ (23) ಅವರಿಗೆ 54ನೇ ಎಸಿಎಂಎಂ ನ್ಯಾಯಾಲಯವು ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
‘ಕಿನ್ನರಿ’ ಧಾರಾವಾಹಿಯಲ್ಲಿ ಅಭಿನಯಿಸಿರುವ ಕಿರಣ್ ವಿರುದ್ಧ, ಮರಾಠಿ ಧಾರಾವಾಹಿಯಲ್ಲಿ ನಟಿಸಿರುವ ರೂಪದರ್ಶಿಯೊಬ್ಬರು ದೂರು ಕೊಟ್ಟಿದ್ದರು. ಹಲ್ಲೆ (ಐಪಿಸಿ 323), ವಂಚನೆ (420) ಹಾಗೂ ಅತ್ಯಾಚಾರ (376) ಆರೋಪಗಳಡಿ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡಿದ್ದರು.
ಸೋಮವಾರ ಬೆಳಿಗ್ಗೆ ಆರೋಪಿಯನ್ನು ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದರು. ಆರೋಪಿ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಜಾಮೀನು ಮಂಜೂರು ಮಾಡಿದರು. ‘₹1 ಲಕ್ಷ ಮೌಲ್ಯದ ಬಾಂಡ್ ನೀಡಬೇಕು. ಸಾಕ್ಷ್ಯ ನಾಶ ಮಾಡಬಾರದು. ಇಬ್ಬರು ವ್ಯಕ್ತಿಗಳ ಶ್ಯೂರಿಟಿ ನೀಡಬೇಕು’ ಎಂದು ಜಾಮೀನಿಗೆ ಷರತ್ತು ವಿಧಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.