ಬೆಂಗಳೂರು: ಬಜೆಟ್ನಲ್ಲಿ ಘೋಷಣೆ ಮಾಡಿದ್ದ ‘ನಮ್ಮ ಕ್ಯಾಂಟೀನ್’ ಯೋಜನೆಯ ಸಹಭಾಗಿತ್ವಕ್ಕೆ ಇಸ್ಕಾನ್ ಸಂಸ್ಥೆ ತಾತ್ವಿಕ ಒಪ್ಪಿಗೆ ಸೂಚಿಸಿದೆ.
ಬಿಬಿಎಂಪಿಯ ಎಲ್ಲ 198 ವಾರ್ಡ್ಗಳಲ್ಲಿ ‘ನಮ್ಮ ಕ್ಯಾಂಟೀನ್’ಗಳನ್ನು ನಿರ್ಮಿಸಿ, ₹ 10ಕ್ಕೆ ಊಟ ಹಾಗೂ ₹ 5ಕ್ಕೆ ಉಪಾಹಾರ ನೀಡುವುದಾಗಿ ಸರ್ಕಾರ ಬಜೆಟ್ನಲ್ಲಿ ಘೋಷಣೆ ಮಾಡಿತ್ತು.
‘ನಮ್ಮ ಕ್ಯಾಂಟೀನ್’ ಯೋಜನೆಯನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ.ಖಾದರ್ ಕಾರ್ಯೋನ್ಮುಖರಾಗಿದ್ದಾರೆ. ಯೋಜನೆಯ ರೂಪುರೇಷೆ ಬಗ್ಗೆ ಇಸ್ಕಾನ್ ಪ್ರತಿನಿಧಿಗಳು ಹಾಗೂ ಬಿಬಿಎಂಪಿಯ ಅಧಿಕಾರಿಗಳೊಂದಿಗೆ ಮಂಗಳವಾರ ನಗರದಲ್ಲಿ ಮಾತುಕತೆ ನಡೆಸಿದ್ದಾರೆ.
‘ಕೆಲ ಸಮಸ್ಯೆಗಳು ಇತ್ಯರ್ಥವಾಗಬೇಕಿವೆ. ಇವುಗಳು ನಿವಾರಣೆಯಾದರೆ ‘ನಮ್ಮ ಕ್ಯಾಂಟೀನ್’ ಯೋಜನೆಯ ಉಸ್ತುವಾರಿ ವಹಿಸಿಕೊಳ್ಳಲು ನಾವು ಸಿದ್ಧ ಎಂದು ಇಸ್ಕಾನ್ ಪ್ರತಿನಿಧಿಗಳು ಹೇಳಿರುವುದಾಗಿ’ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಭಾಗಿಯಾಗಿದ್ದ ಇಸ್ಕಾನ್ ಪ್ರತಿನಿಧಿ ಮಾತನಾಡಿ, ‘ನಮ್ಮ ಕ್ಯಾಂಟೀನ್ ಉಸ್ತುವಾರಿಗೆ ಸರ್ಕಾರದ ಜತೆ ಕೈಜೋಡಿಸಲು ನಾವು ಸಿದ್ಧ. ಯೋಜನೆಯನ್ನು ಮುನ್ನಡೆಸುವ ಸಾಮರ್ಥ್ಯ ನಮಗಿದೆ. ಕ್ಯಾಂಟೀನ್ಗಳಿಗೆ ಸ್ಥಳ ಮತ್ತು ಮೂಲಭೂತ ಸೌಕರ್ಯಗಳನ್ನು ಬಿಬಿಎಂಪಿಯವರು ಒದಗಿಸಿದರೆ, ಆಹಾರ ಸರಬರಾಜು ಮಾಡುತ್ತೇವೆ. ಉಪಾಹಾರ ಮತ್ತು ಊಟವನ್ನು ಪ್ಲೇಟ್ ಆಧಾರವಾಗಿ ನೀಡುತ್ತೇವೆ’ ಎಂದರು.
ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಮಾತನಾಡಿ, ‘ಜೂನ್ 1 ರಿಂದ ನಮ್ಮ ಕ್ಯಾಂಟೀನ್ಗಳನ್ನು ಕಾರ್ಯಾರಂಭಕ್ಕೆ ತರುವ ಗುರಿಯನ್ನು ಹೊಂದಿದ್ದೇವೆ’ ಎಂದು ಅವರು ಹೇಳಿದರು.
ಇಂದಿರಾ ಕ್ಯಾಂಟೀನ್ ಹೆಸರಿಡಲು ಆಗ್ರಹ
‘ನಮ್ಮ ಕ್ಯಾಂಟೀನ್’ ಬದಲಾಗಿ ‘ನಮ್ಮ ಇಂದಿರಾ ಕ್ಯಾಂಟೀನ್’ ಎಂಬ ಹೆಸರಿಡಲು ಒತ್ತಾಯ ಮಾಡುತ್ತೇವೆ’ ಎಂದು ಜ್ಞಾನಭಾರತಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ ಅವರು ಹೇಳಿದರು.
‘ದೇಶದ ಅಪ್ರತಿಮ ನಾಯಕಿ ಇಂದಿರಾಗಾಂಧಿ. ಅವರ ಹೆಸರನ್ನು ನಮ್ಮ ಕ್ಯಾಂಟೀನ್ ಯೋಜನೆಗೆ ಇಡಬೇಕು ಎಂದು ನಗರದ ಸಚಿವರು, ಕಾಂಗ್ರೆಸ್ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಬುಧವಾರ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸುತ್ತೇವೆ’ ಎಂದು ಹೇಳಿದರು.