ADVERTISEMENT

ನಾರಾಯಣಮೂರ್ತಿ ಸಲಹೆ ಕೋರಿದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 19:51 IST
Last Updated 1 ಜೂನ್ 2018, 19:51 IST
ಎನ್.ಆರ್. ನಾರಾಯಣಮೂರ್ತಿ ಅವರ ಜತೆಗೆ ಎಚ್‌.ಡಿ. ಕುಮಾರಸ್ವಾಮಿ ಚರ್ಚಿಸಿದರು
ಎನ್.ಆರ್. ನಾರಾಯಣಮೂರ್ತಿ ಅವರ ಜತೆಗೆ ಎಚ್‌.ಡಿ. ಕುಮಾರಸ್ವಾಮಿ ಚರ್ಚಿಸಿದರು   

ಬೆಂಗಳೂರು: ನಗರದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಕುರಿತು ಉಪಯುಕ್ತ ಸಲಹೆ ನೀಡುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಇನ್ಫೊಸಿಸ್‌ ಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರಲ್ಲಿ ಮನವಿ ಮಾಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ನಾರಾಯಣಮೂರ್ತಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಮುಖ್ಯಮಂತ್ರಿ, ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಸಮಿತಿಗಳನ್ನು ರಚಿಸಲು ಮಾರ್ಗದರ್ಶನ ನೀಡುವಂತೆಯೂ ಕೋರಿದರು.

‘ಈ ಸಮಿತಿಯ ಭಾಗವಾಗಿರಲು ನನಗೆ ಹೆಮ್ಮೆ ಇದೆ. ಎರಡು ತಿಂಗಳಲ್ಲಿ ಸಲಹೆಗಳನ್ನು ನೀಡುತ್ತೇನೆ’ ಎಂದು ನಾರಾಯಣಮೂರ್ತಿ ಆಶ್ವಾಸನೆ ನೀಡಿದರು.

ADVERTISEMENT

‘ನೀವು ಅಧಿಕಾರದಲ್ಲಿರುವಾಗಲೂ, ಇಲ್ಲದಿರುವಾಗಲೂ ನಿಮ್ಮ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದೇನೆ. ರಾಜ್ಯದ ಜನತೆಗೆ, ಕೃಷಿಕರಿಗಾಗಿ ಮಾಡುತ್ತಿರುವ ಕೆಲಸಗಳು ಶ್ಲಾಘನೀಯ. ಇಸ್ರೇಲ್‌ಗೆ ಭೇಟಿ ನೀಡಿ ಕೃಷಿ ಪದ್ಧತಿಯ ಅಧ್ಯಯನ ನಡೆಸಿರುವುದೂ ಉತ್ತಮ ನಡೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಾಗ, ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಗರದ ಸೇವಾ ಸಂಸ್ಥೆಗಳನ್ನೂ ವಿಶ್ವಾಸಕ್ಕೆ ತೆಗೆದು ಕೊಳ್ಳುವಂತೆ ನಾರಾಯಣಮೂರ್ತಿ ಸಲಹೆ ನೀಡಿದರು.

ಮುಖ್ಯಮಂತ್ರಿ ನೇತೃತ್ವದಲ್ಲಿಯೇ ರಚಿಸಲಾಗುವ ಈ ಸಮಿತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.