ಬೆಂಗಳೂರು: ಮನೆಗೆಲಸದ ಜಂಜಾಟವನ್ನು ಬದಿಗೊತ್ತಿ ಹಗ್ಗ ಜಗ್ಗಾಟ, ಗೋಣಿ ಚೀಲದ ಓಟ, ನಿಂಬೆಹಣ್ಣು ಮತ್ತು ಚಮಚದ ಓಟದ ಸ್ಪರ್ಧೆಯಲ್ಲಿ ಮಹಿಳೆ
ಯರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು, ಪುಟಾಣಿಗಳು ವಿವಿಧ ಆಟಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಭುವನೇಶ್ವರಿ ಒಕ್ಕಲಿಗರ ಸಂಘವು ವಿಜಿನಾಪುರದಲ್ಲಿ ಏರ್ಪಡಿಸಿದ್ದ ‘ಕುಟುಂಬ ಮಿಲನ’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳಿವು.
ಮಹಿಳೆಯರು, ಹಿರಿಯರು ಹಾಗೂ ಮಕ್ಕಳು ವಯಸ್ಸಿನ ಅಂತರ ಮರೆತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಮಹಿಳೆಯರಿಗಾಗಿ ರಂಗೋಲಿ ಬಿಡಿಸುವ ಸ್ಪರ್ಧೆ, ಮ್ಯೂಸಿಕಲ್ ಚೇರ್ ಆಟವನ್ನೂ ಹಮ್ಮಿಕೊಳ್ಳಲಾಗಿತ್ತು. ಚಿಣ್ಣರಿಗಾಗಿ ಓಟ, ವಿದ್ಯಾರ್ಥಿಗಳಿಗಾಗಿ ನಿಧಾನಗತಿಯ ಸೈಕಲ್ ತುಳಿಯುವ ಸ್ಪರ್ಧೆ, ವಾಲಿಬಾಲ್, ಥ್ರೋಬಾಲ್, 100 ಮೀ. ಓಟವನ್ನು ಏರ್ಪಡಿಸಲಾಗಿತ್ತು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಘದ ವಿಜಿನಾಪುರ ಘಟಕದ ಅಧ್ಯಕ್ಷ ಪ್ರದೀಪ್ಗೌಡ ಮಾತನಾಡಿ, ‘ಬದಲಾದ ಜೀವನ ಶೈಲಿಯಿಂದಾಗಿ ಜನರು ಕ್ರೀಡೆಗಳಿಂದ ದೂರ ಸರಿಯುತ್ತಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಗಳು ಸಹಕಾರಿ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.