ಬೆಂಗಳೂರು: `ಠೇವಣಿ ಸಂಗ್ರಹದಾರರನ್ನು ಬ್ಯಾಂಕ್ ಕಾರ್ಮಿಕರಂತೆ ಪರಿಗಣಿಸಿ, ನಿರ್ದಿಷ್ಟ ವೇತನವನ್ನು ನಿಗದಿಪಡಿಸಬೇಕು~ ಎಂದು ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ರಾಮಕೃಷ್ಣ ಪೂಂಜಾ ಆಗ್ರಹಿಸಿದರು.
ಆಲ್ ಇಂಡಿಯಾ ಬ್ಯಾಂಕ್ ಡಿಪಾಸಿಟ್ ಕಲೆಕ್ಟರ್ ವರ್ಕಮನ್ ಯೂನಿಯನ್ ಸಂಘವು ನಗರದಲ್ಲಿ ಶನಿವಾರ ಆಯೋಜಿಸಿದ್ದ 4ನೇ ರಾಷ್ಟ್ರೀಯ ಅಧಿವೇಶನದಲ್ಲಿ ಅವರು ಮಾತನಾಡಿದರು.
`ಹಗಲಿರುಳನ್ನದೆ ಠೇವಣಿ ಸಂಗ್ರಹ ಮಾಡುವ ಕಾರ್ಮಿಕರ ಮಾಸಿಕ ಇಂಧನ ಭತ್ಯೆ 100ರಿಂದ 3 ಸಾವಿರ ರೂಪಾಯಿಗೆ ಏರಿಸಬೇಕು. ಇತರೆ ಕಾರ್ಮಿಕರಿಗೆ ನೀಡುವಂತೆ ಬ್ಯಾಂಕ್ ವಿಮೆ, ಆರೋಗ್ಯ ಭತ್ಯೆ, ಭವಿಷ್ಯ ನಿಧಿಯ ಸೌಲಭ್ಯವನ್ನು ಒದಗಿಸಬೇಕು~ ಎಂದು ಒತ್ತಾಯಿಸಿದರು.
ಮಾಜಿ ಸಂಸದ ಶಿವಣ್ಣ, ` ಠೇವಣಿ ಸಂಗ್ರಹದಾರರು ಜಾಗತೀಕರಣದ ಭರಾಟೆಯಿಂದ ಹೊಸ ಸವಾಲುಗಳನ್ನು ಎದುರಿಸುತ್ತಿದ್ದು, ಸರ್ಕಾರ ಈ ಕಡೆ ಗಮನ ಹರಿಸಬೇಕು~ ಎಂದು ಹೇಳಿದರು. ಯೂನಿಯನ್ ಅಧ್ಯಕ್ಷ ಎನ್. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎಚ್.ಡಿ.ಅಶೋಕ್ಕುಮಾರ್ ಇತರರು ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.