ಮಹದೇವಪುರ: ಕ್ಷೇತ್ರದ ಪ್ರಮುಖ ವೃತ್ತಗಳಲ್ಲಿ ಒಂದಾಗಿರುವ ಓ ಫಾರಂ ವೃತ್ತದಲ್ಲಿರುವ ಬಸ್ ನಿಲ್ದಾಣಗಳು ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗಿ ಹೋಗಿವೆ.
ಓಫಾರಂ-ಹೊಸಕೋಟೆ ರಸ್ತೆಯಲ್ಲಿರುವ ಬಸ್ ನಿಲ್ದಾಣವಂತೂ ಸಂಪೂರ್ಣವಾಗಿ ಮುರಿದು ಹೋಗಿದೆ. ಒಂದು ವರ್ಷದಿಂದ ಅದೇ ಸ್ಥಿತಿಯಲ್ಲಿಯೇ ಇದೆ. ಈ ನಿಲ್ದಾಣವನ್ನು ತೆರವುಗೊಳಿಸುವುದಾಗಲಿ, ದುರಸ್ತಿ ಮಾಡುವ ಕಾರ್ಯ ನಡೆದಿಲ್ಲ. ಅದರ ಪಕ್ಕದಲ್ಲಿಯೇ ನಿರ್ಮಾಣಗೊಂಡಿರುವ ಇನ್ನೊಂದು ಬಸ್ ನಿಲ್ದಾಣದ ಸ್ಥಿತಿ ದಯನೀಯವಾಗಿದೆ.
ಓಫಾರಂ ವೃತ್ತದಲ್ಲಿ ವೈಟ್ಫೀಲ್ಡ್-ಸರ್ಜಾಪುರ ಮುಖ್ಯ ರಸ್ತೆಯ ನಡುವೆ ಇರುವ ಬಸ್ ನಿಲ್ದಾಣವೂ ಮುರಿದು ಹೋಗಿದೆ. ನಿಲ್ದಾಣದಲ್ಲಿನ ವಿದ್ಯುತ್ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಹೀಗಾಗಿ ಪ್ರಯಾಣಿಕರು ಸಂಜೆಯಾಗುತ್ತಿದ್ದಂತೆ ಬಸ್ ನಿಲ್ದಾಣದಲ್ಲಿ ನಿಂತುಕೊಳ್ಳಲು ಭಯಪಡುತ್ತಾರೆ. ಈ ಪ್ರದೇಶದಲ್ಲಿ ಸರಗಳ್ಳರ ಹಾವಳಿಯೂ ಹೆಚ್ಚಾಗಿದೆ.
ಓಫಾರಂನಿಂದ ಇಂಟರ್ನ್ಯಾಷನಲ್ ಟೆಕ್ ಪಾರ್ಕ್ (ಐಟಿಪಿಎಲ್) ಹಾಗೂ ಟಿನ್ಫ್ಯಾಕ್ಟರಿ, ಬೆಂಗಳೂರು ನಗರದ ಕಡೆಗೆ ಹೋಗುವ ರಸ್ತೆಯಲ್ಲಿರುವ ಬಸ್ ನಿಲ್ದಾಣವೂ ಸುಸ್ಥಿತಿಯಲ್ಲಿ ಇಲ್ಲ. ರಸ್ತೆಯ ಪಕ್ಕದ ಫುಟ್ಫಾತ್ ಮೇಲೆ ನಿಂತುಕೊಂಡು ಪ್ರಯಾಣಿಕರು ಬಸ್ಗಾಗಿ ಕಾಯುತ್ತ ನಿಲ್ಲುತ್ತಾರೆ.
ಓಫಾರಂನಿಂದ ಚನ್ನಸಂದ್ರ-ಚಿಕ್ಕತಿರುಪತಿ ಕಡೆಗೆ ಹೋಗುವ ರಸ್ತೆಯಲ್ಲಿ 20 ವರ್ಷಗಳಿಂದಲೂ ಅಗತ್ಯವಾದ ಬಸ್ ನಿಲ್ದಾಣವೇ ನಿರ್ಮಾಣಗೊಂಡಿಲ್ಲ. ಈ ಸ್ಥಳದಲ್ಲಿ ಸೂಕ್ತವಾದ ಬಸ್ ನಿಲ್ದಾಣವನ್ನು ನಿರ್ಮಿಸುವಂತೆ ಸ್ಥಳೀಯರು ಅನೇಕ ಬಾರಿ ಒತ್ತಾಯಿಸಿದರೂ ಪ್ರಯೋಜನ ಆಗಿಲ್ಲ.
`ಸರಿಯಾದ ಬಸ್ ನಿಲ್ದಾಣ ಇಲ್ಲದ ಕಾರಣ ಚಾಲಕರು ಮನಸ್ಸಿಗೆ ಬಂದ ಕಡೆಗಳಲ್ಲಿ ಬಸ್ಗಳನ್ನು ನಿಲ್ಲಿಸುತ್ತಾರೆ. ಹಾಗಾಗಿ ಅತ್ತಿತ್ತ ಓಡೋಡಿ ಹೋಗಿ ಬಸ್ಗಳನ್ನು ಹತ್ತಬೇಕಾಗುತ್ತಿದೆ. ಈ ಬಗ್ಗೆ ಬಿಎಂಟಿಸಿ ಗಮನಹರಿಸುತ್ತಿಲ್ಲ' ಎಂದು ಪ್ರಯಾಣಿಕ ಅರುಣಕುಮಾರ್ ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.