ನೆಲಮಂಗಲ: ಶಿಕ್ಷಕರು ತಮ್ಮ ವ್ಯಕ್ತಿತ್ವಕ್ಕೆ ವಿಶಿಷ್ಠವೆನಿಸಿದ ಗುಣಲಕ್ಷಣಗಳನ್ನು ಬದಲಿಸದೆ ಕಾಯ್ದುಕೊಳ್ಳುತ್ತಾರೆ ಎಂದು ಗ್ರಾ.ಪಂ. ಅಧ್ಯಕ್ಷ ವಿ. ರಾಮಸ್ವಾಮಿ ಅಭಿಪ್ರಾಯಪಟ್ಟರು.
ಗೋಪಾಲಪುರ ಹಿರಿಯ ವಿದ್ಯಾರ್ಥಿಗಳು ಗ್ರಾಮದ ಗೋಪಾಲಕೃಷ್ಣ ಯುವಕ ಸಂಘ ಮತ್ತು ನೆಲಮಂಗಲ ರೋಟರಿ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ವಿಶೇಷ ತಹಶೀಲ್ದಾರ್ ಶಿವಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಮುನಿಕೊಂಪಣ್ಣ ಪ್ರಥಮ ರಕ್ತದ ಯೂನಿಟ್ ಅನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ವಿ.ನಾಗರಾಜು ಅವರಿಗೆ ನೀಡಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ಸಾಹಿತಿ ತ್ಯಾಮಗೊಂಡ್ಲು ಅಂಬರೀಷ್ ಸನ್ಮಾನ ಸ್ವೀಕರಿಸಿ, ನಿವೃತ್ತ ಶಿಕ್ಷಕರಿಗೆ ಗುರುವಂದನೆ ಸಲ್ಲಿಸುತ್ತಿರುವುದು ಅನುಕರಣೀಯ ಎಂದರು. ಸಮಾರಂಭದಲ್ಲಿ 105 ಮಂದಿ ನೇತ್ರದಾನಕ್ಕೆ ಹೆಸರು ನೋಂದಣಿ ಮಾಡಿದರು. ನೋಂದಣಿ ಪತ್ರವನ್ನು ಗ್ರಾಮದ ಯುವ ಮುಖಂಡ ರಮೇಶ್ ನಾರಾಯಣ ನೇತ್ರಾಲಯಕ್ಕೆ ನೀಡಿದರು.
ನಟಿ ಸುಶೀಲಮ್ಮ, ರಾಷ್ಟ್ರಮಟ್ಟದ ನೆಟ್ಬಾಲ್ ಕ್ರೀಡಾಪಟು ಎಚ್.ಎಸ್.ಲೀಲಾವತಿ, ಜನಪದ ಕಲಾವಿದ ಕಡಬಗೆರೆ ಮುನಿರಾಜು, ಯಕ್ಷಿಣಿ ಕಲಾವಿದ ಎಂ.ರಾಜು, ಬೊಮ್ಮಶೆಟ್ಟಹಳ್ಳಿ ಜಿ.ಬೈಲಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಬಾಳೆಮನೆ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.