ADVERTISEMENT

ನೀರನ್ನು ಕೇಳುವ ನೆಪದಲ್ಲಿ ದರೋಡೆ?

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:43 IST
Last Updated 22 ಮಾರ್ಚ್ 2014, 19:43 IST

ಬೆಂಗಳೂರು: ‘ನೀರು ಕೇಳುವ ನೆಪದಲ್ಲಿ ಮನೆ ಬಳಿ ಬಂದ ಮಹಿಳೆ ಹಾಗೂ ಯುವಕ, ನನ್ನ ಕೈ--ಕಾಲುಗಳನ್ನು ಕಟ್ಟಿ 400 ಗ್ರಾಂ ಚಿನ್ನಾಭರಣ ದೋಚಿದರು’ ಎಂದು ಕವಿತಾ ಎಂಬುವರು ಕುಮಾರಸ್ವಾಮಿ ಲೇಔಟ್‌ ಠಾಣೆಗೆ ಶನಿವಾರ ದೂರು ಕೊಟ್ಟಿದ್ದಾರೆ.

‘ಸಂಜೆ 4 ಗಂಟೆ ಸುಮಾರಿಗೆ ಅತ್ತೆ ಹಾಗೂ ನಾನು ನಡುಮನೆಯಲ್ಲಿ ಮಲ­ಗಿ­ದ್ದೆವು. ಈ ವೇಳೆ ಬಾಗಿಲು ಬಡಿದ ಮಹಿಳೆ, ಕುಡಿಯಲು ನೀರು ಕೇಳಿ­ದಳು. ಆಕೆಯೊಂದಿಗೆ ಒಬ್ಬ ಯುವಕ ಕೂಡ ಇದ್ದ. ನೀರು ತರಲು ಒಳಗೆ ಹೋಗು­ತ್ತಿ­ದ್ದಂತೆಯೇ ಇಬ್ಬರೂ ನನ್ನನ್ನು ಹಿಂಬಾಲಿಸಿ ಬಂದು ಬಾಯಿಗೆ ಬಟ್ಟೆ ತುರುಕಿದರು. ನಂತರ ಕೈಕಾ­ಲು­ಗ­ಳನ್ನು ಕಟ್ಟಿ ಚಾಕುವಿನಿಂದ ಬೆದರಿಸಿ­ದರು.

ನಂತರ ಕೋಣೆಗೆ ತೆರಳಿ ಅಲ್ಮೆ­ರಾ­ದಲ್ಲಿದ್ದ 400 ಗ್ರಾಂ ತೂಕದ ಒಡ­ವೆ­ಗಳನ್ನು ದೋಚಿದರು’ ಎಂದು ಕವಿತಾ ದೂರಿನಲ್ಲಿ ಹೇಳಿದ್ದಾರೆ. ಆದರೆ, ಕವಿತಾ ಅತ್ತೆ ಪಾಪಮ್ಮ ಈ ಆರೋಪ­ವನ್ನು ತಳ್ಳಿ ಹಾಕಿದ್ದಾರೆ. ‘ಮಗ ಮಂಜುನಾಥ್‌ ಖಾಸಗಿ ಕಂಪೆನಿ­ಯಲ್ಲಿ ಉದ್ಯೋಗಿ­ಯಾಗಿ­ದ್ದಾನೆ. ಸೊಸೆ ಕವಿತಾ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡು­ತ್ತಾಳೆ.

ಸಂಜೆ 4 ಗಂಟೆಗೆ ನಾನು ಸಹ ಆಕೆಯ ಜತೆಯೇ ಮಲಗಿದ್ದೆ. ಯಾವುದೇ ಕಳ್ಳರು ಮನೆಗೆ ನುಗ್ಗಿಲ್ಲ. ಈಕೆಯೇ ಆಭರಣ ತೆಗೆದುಕೊಂಡು ನಾಟಕ­ವಾಡುತ್ತಿದ್ದಾಳೆ’ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

‘ಪ್ರಕರಣ ಸಂಬಂಧ ಕುಟುಂಬ ಸದಸ್ಯರು ಭಿನ್ನ ಹೇಳಿಕೆಗಳನ್ನು ನೀಡಿ­ದ್ದಾರೆ. ಎಲ್ಲಾ ಆಯಾಮಗಳಿಂದ ತನಿಖೆ ಮಾಡಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಗಳು  ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.