ADVERTISEMENT

ನೆಲಸಮ ಆದೇಶಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:34 IST
Last Updated 6 ಮಾರ್ಚ್ 2014, 19:34 IST

ಬೆಂಗಳೂರು: ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿದೆ ಎನ್ನಲಾದ ಸರ್ಜಾಪುರ ವರ್ತುಲ ರಸ್ತೆಯ ಇಬ್ಬಲೂರಿನಲ್ಲಿರುವ ಶೋಭಾ ಗಾರ್ನೆಟ್‌ ಅಪಾರ್ಟ್‌ಮೆಂಟ್‌ನ ಕೆಲವು ಭಾಗಗಳನ್ನು ನೆಲಸಮ ಮಾಡುವ ಕಾರ್ಯಕ್ಕೆ ಹೈಕೋರ್ಟ್‌ ಎಂಟು ವಾರಗಳ ತಡೆಯಾಜ್ಞೆ ನೀಡಿದೆ.

ಶೋಭಾ ಗಾರ್ನೆಟ್‌ ಅಪಾರ್ಟ್‌­ಮೆಂಟ್‌ ಮಾಲೀಕರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯ­ಮೂರ್ತಿ ಜವ್ವಾದ್‌ ರಹೀಂ ನಡೆಸಿದರು.

‘ಅಧಿಕಾರಿಗಳು ಅಪಾರ್ಟ್‌­ಮೆಂಟ್‌ನ ಆವರಣ ಗೋಡೆ ಕೆಡವಿ­ದ್ದಾರೆ. ಅಪಾರ್ಟ್‌ಮೆಂಟ್‌ನ ಕೆಲಸ ಭಾಗ ಇಬ್ಬಲೂರು ಕೆರೆ ಒತ್ತುವರಿ ಮಾಡಿದ ಜಾಗದಲ್ಲಿದೆ ಎಂಬ ಆರೋಪದ ಅಡಿ ಅಪಾರ್ಟ್‌ಮೆಂಟ್‌ ನೆಲಸಮ ಮಾಡಲು ಬೆಂಗಳೂರು ದಕ್ಷಿಣ ತಹಶೀಲ್ದಾರ್‌ ಸೂಚನೆ ನೀಡಿದ್ದಾರೆ. ಆದರೆ ಹಾಗೆ ಮಾಡುವ ಮುನ್ನ ನಮಗೆ ನೋಟಿಸ್‌ ನೀಡಿಲ್ಲ. ನಮ್ಮಿಂದ ಒತ್ತುವರಿ ಆಗಿಲ್ಲ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ವಿಚಾರಣೆ ಮುಂದೂಡಲಾಗಿದೆ.

ಸಿಬಿಐ ತನಿಖೆ ಕೋರಿ ಅರ್ಜಿ
ಮಲ್ಲೇಶ್ವರದ ಸೇಂಟ್‌ ಪೀಟರ್ಸ್‌ ಪಾಂಟಿಫಿಕಲ್‌ ಸೆಮಿನರಿಯ ರೆಕ್ಟರ್‌ ಕೆ.ಜೆ. ಥಾಮಸ್‌ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಸರ್ಕಾ­ರಕ್ಕೆ ನೋಟಿಸ್‌ ಜಾರಿಗೆ ಗುರುವಾರ ಆದೇಶಿಸಿದೆ.

ಕೊಟ್ಟಾಯಂನ ಜೋಸೆಫ್‌ ಮ್ಯಾಥ್ಯೂ ಎಂಬುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯ­ಮೂರ್ತಿ ಎಸ್‌. ಅಬ್ದುಲ್‌ ನಜೀರ್‌ ನಡೆಸಿದರು. ಪೊಲೀಸರು ಈ ಪ್ರಕರ­ಣದ ತನಿಖೆಯನ್ನು ಸಮರ್ಪಕ­ವಾಗಿ ನಡೆಸು­ತ್ತಿಲ್ಲ. ಆರೋಪಿಗಳನ್ನು ಪತ್ತೆ­ಮಾಡಿಲ್ಲ ಎಂದು ಅರ್ಜಿಯಲ್ಲಿ ದೂರ­ಲಾಗಿದೆ. ವಿಚಾರಣೆ ಮುಂದೂಡ­ಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.