ಬೆಂಗಳೂರು: ಪರೀಕ್ಷೆ ಬರೆದಿದ್ದರೂ, ಪ್ರಾಯೋಗಿಕ ಪರೀಕ್ಷೆಯಲ್ಲಿ ಗೈರು ಹಾಜರಿಯಾಗಿದ್ದಾರೆಂದು ಫಲಿತಾಂಶ ಹೊರಬಿದ್ದಿರುವುದು ಶೇಷಾದ್ರಿಪುರ ಪದವಿ ಕಾಲೇಜಿನಲ್ಲಿ ಈ ಬಾರಿಯೂ ಮುಂದುವರೆದಿದೆ.
ಅಕ್ಟೋಬರ್ 3 ರಂದು ಪ್ರಾಯೋಗಿಕ ಪರೀಕ್ಷೆ ನಡೆದಿದೆ. ಅಕ್ಟೋಬರ್ 12ರಿಂದ ನವೆಂಬರ್ 3ರವರೆಗೆ ಮುಖ್ಯ ಪರೀಕ್ಷೆಗಳು ನಡೆದಿದೆ. ಆದರೆ ಡಿಸೆಂಬರ್ 21ರಂದು ಬಂದ ಫಲಿತಾಂಶ ವಿದ್ಯಾರ್ಥಿಗಳನ್ನು ಆತಂಕಕ್ಕೆ ಗುರಿ ಮಾಡಿದೆ. ಕಾರಣ ಪರೀಕ್ಷೆ ಬರೆದ ಒಟ್ಟು 29 ವಿದ್ಯಾರ್ಥಿಗಳಲ್ಲಿ 28 ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಯಲ್ಲಿ ಗೈರಾಗಿದ್ದಾರೆ ಎಂದು ಫಲಿತಾಂಶ ಬಂದಿದೆ.
ಶೇಷಾದ್ರಿಪುರ ಕಾಲೇಜು ಕಳೆದ ಕೆಲ ದಿನಗಳಿಂದ ಇದೇ ವಿವಾದಕ್ಕೆ ಗುರಿಯಾಗಿದೆ. ಹಿಂದೆ ಇದೇ ಸಮಸ್ಯೆಗೆ ಪ್ರತಿಕ್ರಿಯಿಸಿದ್ದ ಮನಶಾಸ್ತ್ರ ವಿಭಾಗದ ಮುಖ್ಯಸ್ಥರು `ವಿಷಯವನ್ನು ವಿಶ್ವವಿದ್ಯಾಲಯಕ್ಕೆ ತಿಳಿಸಿದ್ದೇವೆ, ಶೀಘ್ರವೇ ಪರಿಹರಿಸುವುದಾಗಿ ತಿಳಿಸಿದ್ದಾರೆ~ ಎಂದಿದ್ದರು. ಆದರೆ ವಿವಿಯ ಅಧಿಕಾರಿ ಹೇಳುವಂತೆ `ಇದೊಂದು ಸಣ್ಣ ವಿಚಾರ ಶೀಘ್ರವೇ ಬಗೆಹರಿಸಬಹುದಿತ್ತು ಆದರೆ ಕಾಲೇಜಿನಿಂದ ಸಮಸ್ಯೆಯ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ~ ಎನ್ನುತ್ತಾರೆ. ಹೀಗೆ ಆಡಳಿತದ ಬಗ್ಗೆ ಸಂಶಯ ಉಂಟಾಗಿದೆ. ಆದರೆ ವಿದ್ಯಾರ್ಥಿಗಳು ಆಡಳಿತದ ಉತ್ತರಕ್ಕಾಗಿ ಕಾಯುತ್ತಿದ್ದಾರೆ.
`ಸಮಸ್ಯೆಗೆ ಸಂಬಂಧಿಸಿದಂತೆ ಪ್ರಾಂಶುಪಾಲರ ಬಳಿ ಚರ್ಚಿಸುವಂತೆ ಕೆಲವು ಪ್ರಾಧ್ಯಾಪಕರು ಹೇಳುತ್ತಾರೆ. ಆದರೆ ಪ್ರಾಂಶುಪಾಲರು ನಮ್ಮಡನೆ ಮಾತನಾಡಲು ತಯಾರಿಲ್ಲ ಅಲ್ಲದೇ ನಮ್ಮ ನೊಂದಣಿ ಸಂಖ್ಯೆಯನ್ನು ವೈಟ್ನರ್ ಬಳಸಿ ಬದಲಾಯಿಸಲಾಗುತ್ತಿದೆ~ ಎಂದು ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದರು.
ಕೆಲವೇ ದಿನಗಳಲ್ಲಿ ಅಂಕಪಟ್ಟಿ ಬರಲಿದ್ದು ಅದರಲ್ಲಿ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಬಂದರೆ ಮರು ಪರೀಕ್ಷೆ ನಡೆಸುತ್ತೆವೆ ಅಥವಾ ಬದಲಿ ಪರಿಹಾರ ಮಾರ್ಗ ಹುಡುಕುತ್ತೇವೆ ಎಂದು ವಿವಿ ಅಧಿಕಾರಿಗಳು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.