ADVERTISEMENT

`ಪೊಲೀಸರು ಶತ್ರುಗಳಲ್ಲ, ಸಮಾಜದ ರಕ್ಷಕರು'

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:52 IST
Last Updated 1 ಏಪ್ರಿಲ್ 2013, 19:52 IST

ಬೆಂಗಳೂರು: `ಪೊಲೀಸರು ಎಂದರೆ ಸಾಮಾನ್ಯ ಜನರಲ್ಲಿ ಭಯವಿದೆ. ಆದರೆ, ಪೊಲೀಸರು ಶತ್ರುಗಳಲ್ಲ. ಸಮಾಜದ ರಕ್ಷಕರು' ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟರು.

ಬೆಂಗಳೂರು ನಾಗರಿಕರ ಕನ್ನಡ ವೇದಿಕೆಯು ಇತ್ತೀಚೆಗೆ ನಗರದಲ್ಲಿ ಆಯೋಜಿಸಿದ್ದ ವೇದಿಕೆಯ 15ನೇ ವಾರ್ಷಿಕೋತ್ಸವ ಮತ್ತು ಗೌರವಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ಪೊಲೀಸ್ ಇಲಾಖೆಯು ಉತ್ತಮವಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರಲ್ಲಿ ವಿಶ್ವಾಸಾರ್ಹತೆಯನ್ನು ಮೂಡಿಸಬೇಕಾದ ಅಗತ್ಯವಿದೆ' ಎಂದು ಹೇಳಿದ ಅವರು, `ಪೊಲೀಸ್ ಠಾಣೆಗಳ ಸಂಖ್ಯೆ ಹೆಚ್ಚುತ್ತಿವೆ. ಇದು ಅಭಿವೃದ್ಧಿಯ ಸಂಕೇತವಲ್ಲ. ಸಮಾಜದ ಜನರು ಎಷ್ಟು ಪ್ರಾಮಾಣಿಕರು, ನಿಷ್ಠರು ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ವಿಷಯ. ನಾಗರಿಕ ಸಮಾಜಕ್ಕೆ ಇಷ್ಟು ಸಂಖ್ಯೆಯ ಪೊಲೀಸ್ ಠಾಣೆಗಳ ಅಗತ್ಯವಿದೆಯೇ' ಎಂದು ಪ್ರಶ್ನೆ ಮಾಡಿದರು.
ಆಸ್ಪತ್ರೆಗಳು, ಪೊಲೀಸ್ ಠಾಣೆಗಳು, ನ್ಯಾಯಾಲಯಗಳ ಸಂಖ್ಯೆ ಹೆಚ್ಚುತ್ತಿದೆ ಎಂದರೆ ಜನರ ಆರೋಗ್ಯಮಟ್ಟ ಕುಸಿಯುತ್ತಿದೆ, ಸಾರ್ವಜನಿಕರಲ್ಲಿನ ಉತ್ತಮ ಗುಣಗಳು ನಾಶವಾಗುತ್ತಿವೆ ಎಂದರ್ಥ ಎಂದು ಹೇಳಿದರು.

ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ ಮಾತನಾಡಿ, `ಬೀಡಿ ಕಟ್ಟುವ ಕುಟುಂಬದಿಂದ ಬಂದವನು ನಾನು. ಈ ಸ್ಥಾನಕ್ಕೆ ಬರಲು ನನಗೆ ಹಲವರು ಪ್ರೋತ್ಸಾಹ ನೀಡಿದ್ದಾರೆ. ಆದ್ದರಿಂದ, ಇಲಾಖೆಯಲ್ಲಿದ್ದಾಗ ಸಾರ್ವಜನಿಕರಿಗೆ ನೆರವಾಗಬಲ್ಲ ಸೇವೆಯನ್ನು ನೀಡಲು ಸಾಧ್ಯವಾಯಿತು' ಎಂದು ಹೇಳಿದರು.
ಕನ್ನಡ ಚಳವಳಿ ಕೇಂದ್ರ ಸಮಿತಿಯ ಅಧ್ಯಕ್ಷ ಗುರುದೇವ್ ನಾರಾಯಣ್‌ಕುಮಾರ್, ಪತ್ರಕರ್ತ ಶಿವಾನಂದ ತಗಡೂರು, ಜಿ.ಎ.ಬಾವ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.