ಬೆಂಗಳೂರು: ಕಲೆ, ಅಭಿನಯ, ಕ್ರೀಡೆ, ನೃತ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಅಂಗವಿಕಲ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬೆಂಗಳೂರು ಕಂಟೋನ್ಮೆಂಟ್ ರೋಟರಿ ಕ್ಲಬ್ ಗುರುವಾರ `ಯುವ ಸಾಧಕರು ಪ್ರಶಸ್ತಿ~ ನೀಡಿ ಸನ್ಮಾನಿಸಿತು.
ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಿದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅರ್ಚನಾ, ಅಂಗವಿಕಲ ವಿದ್ಯಾರ್ಥಿಗಳಾದ ಅಥ್ಲೆಟಿಕ್ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಶೃತಿ, ವಿವಿಧ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಸರೋಜಾ, ಉತ್ತಮ ಅಂಕಗಳನ್ನು ಪಡೆದಿರುವ ಸಾಗರ್ ಹಾಗೂ ಅವರ ಸಹೋದರಿ ಅಶ್ವಿನಿ ಅವರಿಗೆ ಪ್ರಶಸ್ತಿ ವಿತರಿಸಲಾಯಿತು.
ಪ್ರೇಮಧ್ವನಿ ಪ್ರತಿಷ್ಠಾನದ ಸಂಸ್ಥಾಪಕ ಚಿಂತನಪಲ್ಲಿ ಶ್ರೀನಾಥ್, `ಕಲೆಯನ್ನು ಆಸ್ವಾದಿಸುವ ರಸಿಕರು ಅತ್ಯಗತ್ಯ. ಅವರಿಂದ ಕಲೆ ಬೆಂಬಲ ಬಯಸುತ್ತದೆ~ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ವಾಸುದೇವ್ ಎನ್. ಮೂರ್ತಿ, `ತಮ್ಮ ಪ್ರಯತ್ನದ ಫಲವಾಗಿ ಇವರು ದೈಹಿಕ ನ್ಯೂನತೆಗಳನ್ನು ಮೀರಿದ್ದಾರೆ. ಈ ವಿದ್ಯಾರ್ಥಿಗಳ ಮುಂದಿನ ಬದುಕಿಗೆ ಕೂಡ ಸಂಸ್ಥೆ ಸಾಧ್ಯವಾದ ಎಲ್ಲಾ ಬಗೆಯ ನೆರವು ನೀಡಲಿದೆ~ ಎಂದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಸ್ಥೆಯ ಕಾರ್ಯದರ್ಶಿ ಜಸ್ಬೀರ್ ಸಿಂಗ್ ದೋಧಿ, ಸಮಿತಿಯ ನಿರ್ದೇಶಕ ಕರುಪು ಸಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.