ADVERTISEMENT

ಪ್ರತಿ ವಾರ್ಡ್‌ಗೆ 2 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 19:40 IST
Last Updated 6 ಮಾರ್ಚ್ 2011, 19:40 IST

ಬೆಂಗಳೂರು: ‘ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಪ್ರತಿ ವಾರ್ಡ್‌ಗೆ ತಲಾ 2 ಕೋಟಿ ರೂಪಾಯಿ ಅನುದಾನ ನೀಡಲಾಗಿದ್ದು, ಕಾಮಗಾರಿಗಳು ಇದೇ ತಿಂಗಳ 5ರಿಂದ ಪ್ರಾರಂಭವಾಗಲಿವೆ’  ಎಂದು ನಗರ ಉಸ್ತುವಾರಿ ಸಚಿವ ಆರ್.ಅಶೋಕ ಹೇಳಿದರು.

ಪಾಲಿಕೆಯ 181ನೇ ವಾರ್ಡ್ ವ್ಯಾಪ್ತಿಯ ಕುಮಾರಸ್ವಾಮಿ ಬಡಾವಣೆಯಲ್ಲಿ ವಿವಿಧ ಕಾಮಗಾರಿಗಳಿಗೆ ಇತ್ತೀಚೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ‘ಪ್ರಸ್ತುತ ವಾರ್ಡಿನ ಕಾಮಗಾರಿಗಳಿಗೆ ರೂ 2.5 ಕೋಟಿ ನೀಡಲಾಗಿದೆ. ಇದರಲ್ಲಿ ರಸ್ತೆಗಳ ಡಾಂಬರೀಕರಣ, ಒಳಚರಂಡಿ ಹಾಗೂ ಇತರೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ’ ಎಂದು ತಿಳಿಸಿದರು.

‘ಬಿಬಿಎಂಪಿ ಪ್ರಗತಿಗೆ ನೀಡಲಾದ ಅನುದಾನ ಸಾಕಾಗುವುದಿಲ್ಲ ಎಂದು ವಿರೋಧ ಪಕ್ಷದ ನಾಯಕರು ಟೀಕಿಸುತ್ತಿದ್ದಾರೆ. ಆದರೆ ಅವರ ಪಕ್ಷ ಅಧಿಕಾರ ಇದ್ದಾಗ ಎಷ್ಟು ಅನುದಾನ ಕೊಟ್ಟಿದ್ದರು ಎನ್ನುವುದನ್ನು ನೆನಪಿಸಿಕೊಳ್ಳಲಿ’ ಎಂದು ತಿರುಗೇಟು ನೀಡಿದರು.‘ಈ ಸಲದ ಬಜೆಟ್‌ನಲ್ಲಿ ನಗರದ ಅಭಿವೃದ್ಧಿಗಾಗಿ ರೂ 350 ಕೋಟಿ ಅನುದಾನ ನೀಡಲಾಗಿದೆ. ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ಮೇಯರ್ ಎಸ್.ಕೆ.ನಟರಾಜ್ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಕೇಂದ್ರದಿಂದ ತಾರತಮ್ಯ: ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ‘ನಮ್ಮ ಮೆಟ್ರೊ’ ಯೋಜನೆಗೆ ಕೇವಲ ರೂ 500 ಕೋಟಿ ನೀಡಿದ್ದರೆ, ಚೆನ್ನೈ ಮೆಟ್ರೊ ಯೋಜನೆಗೆ ರೂ 1250 ಕೋಟಿ ನೀಡುವ ಮೂಲಕ ತಾರತಮ್ಯ ಎಸಗಿದೆ’ ಎಂದು ಸಚಿವರು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.