ಬೆಂಗಳೂರು: ನಗರದ ನಾಲ್ಕು ಕಡೆ ಶುಕ್ರವಾರ ಅಪಘಾತ ಸಂಭವಿಸಿದ್ದು, ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ.
ಹೆಬ್ಬಾಳ ಸಮೀಪದ ಹೊರವರ್ತುಲ ರಸ್ತೆಯಲ್ಲಿ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದು ಹಿಂಬದಿ ಸವಾರ ಪ್ರೇಮ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸವಾರ ವಿರೇಶ್ ಗಾಯಗೊಂಡಿದ್ದಾರೆ.
ಲಾರಿ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ, ಪೀಣ್ಯ ಸಂಚಾರ ಠಾಣೆ ವ್ಯಾಪ್ತಿಯ ಮೇಲ್ಸೇತುವೆ ಯಲ್ಲಿ ಅಪಘಾತ ಸಂಭವಿಸಿದೆ. ಬೈಕ್ ಸವಾರ ಮಂಜುನಾಥ್ (27) ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಕುಶಾಲ್ (21) ತೀವ್ರವಾಗಿ ಗಾಯಗೊಂಡಿದ್ದಾರೆ. ಇವರು ಬೆಂಗಳೂರಿನಿಂದ ತುಮಕೂರು ಕಡೆಗೆ ಹೊರಟಿದ್ದಾಗ ಅವಘಡ ಸಂಭವಿಸಿದೆ. ‘ಸ್ಥಳಕ್ಕೆ ಹೋದಾಗ ರಸ್ತೆಯಲ್ಲೇ ಬೈಕ್ ಹಾಗೂ ಮೃತದೇಹ ಬಿದ್ದಿತ್ತು. ಅಪಘಾತ ಹೇಗಾಯಿತು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ಪೊಲೀಸರು ಹೇಳಿದರು.
ಮೀನು ವ್ಯಾಪಾರಿ ಸಾವು: ಕೆಂಗೇರಿ ಸಮೀಪದಸುರಾನ್ ಕಾಲೇಜು ಬಳಿ ಕ್ಯಾಂಟರ್– ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬಿಡದಿಯ ಶಾಹೀದ್ ಎಂಬುವರು ಸಾವಿಗೀಡಾಗಿದ್ದಾರೆ.
‘ಗೊರಗುಂಟೆಪಾಳ್ಯದಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ ಅವರು ಸ್ನೇಹಿತ ಇರ್ಫಾನ್ ಜೊತೆ ರಾತ್ರಿ ಬೈಕ್ನಲ್ಲಿ ಹೊರಟಿದ್ದಾಗ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.
ರಸ್ತೆ ವಿಭಜಕಕ್ಕೆ ಗುದ್ದಿದ ಬೈಕ್: ದುಬಾಸಿಪಾಳ್ಯದಿಂದ ಕೆಂಗೇರಿ ಕಡೆಗೆ ಹೋಗುವ ರಸ್ತೆಯಲ್ಲಿ ವಿಭಜಕಕ್ಕೆ ಗುದ್ದಿ ಬೈಕೊಂದು ಉರುಳಿದ ಕಾರಣ ಸವಾರ ಮಧುಸೂದನ್ (31) ಮೃತಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.