ADVERTISEMENT

ಪ್ರತ್ಯೇಕ ಅಪಘಾತ: ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 22 ಮೇ 2018, 19:30 IST
Last Updated 22 ಮೇ 2018, 19:30 IST

ಬೆಂಗಳೂರು: ನಗರದ ನಾಲ್ಕು ಕಡೆಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ನಸುಕಿನಲ್ಲಿ ಸಂಭವಿಸಿದ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ರಾಜಾಜಿನಗರದ ಸ್ಟುಡಿಯೊ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಬೈಕ್‌ಗೆ ಲಾರಿ ಗುದ್ದಿದ್ದರಿಂದ ಸವಾರ ಪವನ್‌ಕುಮಾರ್ (19) ಎಂಬುವರು ಸತ್ತಿದ್ದಾರೆ.

ಪ್ರೀತಿನಗರದ ನಿವಾಸಿಯಾಗಿದ್ದ ಅವರು, ಆರ್‌.ಎಂ.ಸಿ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ನಸುಕಿನಲ್ಲಿ ಕೆಲಸ ಮುಗಿಸಿಕೊಂಡು 6.30 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಮನೆಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ.

ADVERTISEMENT

‘ಅಡುಗೆ ಅನಿಲ್ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿಯು ಬೈಕ್‌ಗೆ ಗುದ್ದಿತ್ತು. ಬೈಕ್‌ನಿಂದ ಬಿದ್ದ ಪವನ್‌ಕುಮಾರ್ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ರಾಜಾಜಿನಗರ ಸಂಚಾರ ಪೊಲೀಸರು ತಿಳಿಸಿದರು.

ಇನ್ನೊಂದು ಪ್ರಕರಣದಲ್ಲಿ ದೊಡ್ಡಬಳ್ಳಾಪುರ–ಬೆಂಗಳೂರು ರಸ್ತೆಯ ಅರಳಾಸಂದ್ರದ ತಿರುಮಲ ಡಾಬಾ ಬಳಿ ಬೈಕ್‌ಗೆ ಲಾರಿ ಗುದ್ದಿದ್ದರಿಂದ ಸವಾರ ಮುನಿರಾಜು(40) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಯಲಹಂಕ ಉಪನಗರ ನಿವಾಸಿಯಾಗಿದ್ದ ಅವರು, ಕೆಲಸ ನಿಮಿತ್ತ ಮಂಗಳವಾರ ರಾತ್ರಿ 10.30ಕ್ಕೆ ಬೈಕ್‌ನಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಈ ಸಂಬಂಧ ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಆರ್‌.ಟಿ.ನಗರದ ಬಿ.ಬಿ.ರಸ್ತೆಯ ಸಿಬಿಐ ಬಸ್‌ ನಿಲ್ದಾಣದ ಬಳಿ ಕಾರು ಗುದ್ದಿದ್ದರಿಂದ ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ. ಅವರ ಹೆಸರು ಗೊತ್ತಾಗಿಲ್ಲ.

ಮೃತರಿಗೆ 45ರಿಂದ 50 ವರ್ಷವಾಗಿರಬಹುದು. ರಾತ್ರಿ 11.40  ಗಂಟೆಗೆ ಈ ಅವಘಡ ಸಂಭವಿಸಿದೆ. ಘಟನೆ ಬಳಿಕ ಕಾರು ಸಮೇತ ಚಾಲಕ ಪರಾರಿಯಾಗಿದ್ದಾನೆ. ಎಂ.ಎಸ್.ರಾಮಯ್ಯ ಆಸ್ಪತ್ರೆಯ ಶವಾಗಾರದಲ್ಲಿ ಶವ ಇರಿಸಲಾಗಿದೆ ಎಂದು ಆರ್‌.ಟಿ.ನಗರ ಸಂಚಾರ ಪೊಲೀಸರು ತಿಳಿಸಿದರು.

ಸೈಕಲ್ ಸವಾರ ಸಾವು: ಎಂ.ಎಸ್‌.ರಾಮಯ್ಯ ಆಸ್ಪತ್ರೆಯ ಗೇಟ್ ನಂ. 7ರ ಮುಂಭಾಗದಲ್ಲಿ ಸೈಕಲ್‌ಗೆ ಕಾರು ಗುದ್ದಿದ್ದರಿಂದ ಸವಾರ ಶೇಖ್‌ಕಾಲು (59) ಮೃತಪಟ್ಟಿದ್ದಾರೆ.

ಕೆಂಪಾಪುರ ಅಗ್ರಹಾರದ ಚಿರಂಜೀವಿ ನಗರದ ನಿವಾಸಿಯಾಗಿದ್ದ ಅವರು, ನಸುಕಿನ 1.10 ಗಂಟೆ ಸುಮಾರಿಗೆ ಸೈಕಲ್‌ನಲ್ಲಿ ಹೊರಟಿದ್ದಾಗ ಈ ಘಟನೆ ನಡೆದಿದೆ. ಕಾರು ಸಮೇತ ಚಾಲಕ ಪರಾರಿಯಾಗಿದ್ದಾನೆ ಎಂದು ಸದಾಶಿವನಗರ ಸಂಚಾರ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.