ADVERTISEMENT

ಬನ್ನೇರುಘಟ್ಟ ಜೈವಿಕ ಉದ್ಯಾನವನ ನಾಲ್ಕು ಸಿಂಹದ ಮರಿಗಳ ಸಾವು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 19:00 IST
Last Updated 15 ಸೆಪ್ಟೆಂಬರ್ 2011, 19:00 IST

ಬೆಂಗಳೂರು:  ಇಲ್ಲಿಗೆ ಸಮೀಪದ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸೆ. 3ರಂದು ಅನು ಎಂಬ ಸಿಂಹವು ಜನ್ಮ ನೀಡಿದ್ದ ನಾಲ್ಕು ಮರಿಗಳು ಹಸಿವು ತಾಳಲಾರದೇ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸುಮಾರು 13 ವರ್ಷ ವಯೋಮಾನದ ಅನುಗೆ ಇದು ಮೂರನೇ ಹೆರಿಗೆಯಾಗಿತ್ತು. ಅನುಗೆ ವಯಸ್ಸಾದ ಹಿನ್ನೆಲೆಯಲ್ಲಿ ಈ ಮರಿಗಳಿಗೆ ಹಾಲು ನೀಡುವ ಸಾಮರ್ಥ್ಯವನ್ನು ಕಳೆದುಕೊಂಡಿತ್ತು. ಇದನ್ನು ಗಮನಿಸಿದ ಸಿಬ್ಬಂದಿ ಆ ಮರಿಗಳಿಗೆ ಬೇರೆ ಹಾಲನ್ನು ನೀಡಿದ್ದರು. ತಾಯಿಯ ಹಾಲನ್ನು ಕುಡಿದರಷ್ಟೇ ಉಳಿಯಬಹುದಾಗಿದ್ದ ಮರಿಗಳು, ತಾಯಿ ಸಿಂಹವು ಹಾಲು ನೀಡಲು ಅಸಮರ್ಥವಾದ ಹಿನ್ನೆಲೆಯಲ್ಲಿ ಪ್ರತಿ 12 ಗಂಟೆಗಳ ಅವಧಿಯಲ್ಲಿ (ಸೆ.8ರವರೆಗೆ) ಮೂರು ಮರಿಗಳು  ಸಾವನ್ನಪ್ಪಿದವು.

ಇದಕ್ಕೂ ಮುನ್ನ ಸೆ.3ರಂದೇ ಒಂದು ಮರಿಯು ಜನನವಾದ ಸ್ವಲ್ಪ ಹೊತ್ತಿನಲ್ಲಿಯೇ ಮರಣ ಹೊಂದಿತ್ತು ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ರಾಜು `ಪ್ರಜಾವಾಣಿ~ಗೆ ತಿಳಿಸಿದರು.

ಸಿಂಹಕ್ಕೆ ಸಾಕಷ್ಟು ವಯಸ್ಸಾದ ಹಿನ್ನೆಲೆಯಲ್ಲಿ ಅದು ತಾಯ್ತನದ ಗುಣಗಳನ್ನು ಕಳೆದುಕೊಂಡಿತ್ತು. ಹೆರಿಗೆಯ ನಂತರ ಸ್ವಾಭಾವಿಕವಾಗಿ ಉತ್ಪತ್ತಿಯಾಗುವ ಗಿಣ್ಣು ಹಾಲನ್ನೂ ಈ ಸಿಂಹ ನೀಡಿರಲಿಲ್ಲ. ಹಲವು ಬಾರಿ ವಯಸ್ಸಾದ ಆನೆಗಳಲ್ಲಿಯೂ ಈ ರೀತಿ ಆಗುವುದಿದೆ ಎಂದು ರಾಜು ತಿಳಿಸಿದರು. ಅನುವಿಗೆ ಇದಕ್ಕೂ ಮುಂಚೆ ಎರಡು ಬಾರಿ ಹೆರಿಗೆಯಾಗಿದೆ. ಆಗ ಜನಿಸಿದ್ದ ಏಳೂ ಸಿಂಹಗಳು ಆರೋಗ್ಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.