ADVERTISEMENT

ಬಸ್ ಪ್ರಯಾಣ ದರ ಏರಿಕೆ ಇಲ್ಲ-ಅಶೋಕ

ಸರ್ಕಾರಿ ಬಸ್‌ಗಳಿಗೆ ಖಾಸಗಿ ಬಂಕ್‌ಗಳಿಂದ ಡೀಸೆಲ್ ಖರೀದಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2013, 19:59 IST
Last Updated 21 ಜನವರಿ 2013, 19:59 IST
ಬಸ್ ಪ್ರಯಾಣ ದರ ಏರಿಕೆ ಇಲ್ಲ-ಅಶೋಕ
ಬಸ್ ಪ್ರಯಾಣ ದರ ಏರಿಕೆ ಇಲ್ಲ-ಅಶೋಕ   

ಬೆಂಗಳೂರು:  ಸಗಟು ಖರೀದಿ ಡೀಸೆಲ್ ದರವನ್ನು ಕೇಂದ್ರ ಸರ್ಕಾರ ವಿಪರೀತ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಬಸ್‌ಗಳಿಗೆ ಖಾಸಗಿ ಬಂಕ್‌ಗಳಿಂದ ಡೀಸೆಲ್ ಖರೀದಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ಆರ್.ಅಶೋಕ ಸೋಮವಾರ ಇಲ್ಲಿ ತಿಳಿಸಿದರು.

ಬಿ.ಎಂ.ಟಿ.ಸಿ ಬಸ್‌ಗಳಿಗೆ ಸಗಟು ರೂಪದಲ್ಲಿ ಡಿಸೇಲ್ ಖರೀದಿಸುವುದನ್ನು ಸೋಮವಾರವೇ ಸ್ಥಗಿತಗೊಳಿಸಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೇರಿದಂತೆ ಬೇರೆ ಬೇರೆ ನಿಗಮಗಳ ವ್ಯಾಪ್ತಿಯಲ್ಲೂ ಸಗಟು ಖರೀದಿ ಸ್ಥಗಿತಗೊಳ್ಳಲಿದೆ. ಇನ್ನು ಮುಂದೆ ಖಾಸಗಿ ಬಂಕ್‌ಗಳಿಂದ ಡೀಸೆಲ್ ಖರೀದಿಸಲಾಗುವುದು ಎಂದು ಹೇಳಿದರು.

`ಸಗಟು ಖರೀದಿ ನಿಲ್ಲಿಸಿರುವುದರಿಂದ ದರ ಏರಿಕೆ ಹೊರೆಯಿಂದ ಪಾರಾಗಿದ್ದೇವೆ. ಹೀಗಾಗಿ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವ ಕೈಬಿಡಲಾಗಿದೆ' ಎಂದರು. ಕೇಂದ್ರ ಸರ್ಕಾರ, ಖಾಸಗಿಯವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಗಟು ಖರೀದಿಯ ಡೀಸೆಲ್ ದರವನ್ನು ಲೀಟರ್‌ಗೆ ರೂ11.95ರಷ್ಟು ಹೆಚ್ಚಿಸಿದೆ. ಇದರ ಹಿಂದೆ ಖಾಸಗಿಯವರ ಲಾಬಿ ಕೆಲಸ ಮಾಡಿದೆ ಎಂದು ಅವರು ಆಪಾದಿಸಿದರು.

ಸಗಟು ಖರೀದಿದಾರರಿಗೆ ಅದರಲ್ಲೂ ಸಾರಿಗೆ ನಿಗಮಗಳಿಗೆ ಕಡಿಮೆ ದರದಲ್ಲಿ ಡೀಸೆಲ್ ಪೂರೈಸಬೇಕು. ಆದರೆ, ಕೇಂದ್ರ ಸರ್ಕಾರ ಇದಕ್ಕೆ ವಿರುದ್ಧವಾಗಿ ಕ್ರಮ ಕೈಗೊಂಡಿದೆ. ಖಾಸಗಿಯವರಿಗೆ ಕಡಿಮೆ ದರದಲ್ಲಿ ಡೀಸೆಲ್ ಸರಬರಾಜು ಮಾಡುವ ಸರ್ಕಾರದ ಕ್ರಮ ಸರಿಯಲ್ಲ ಎಂದು ಟೀಕಿಸಿದರು.
ಆಯಾ ಡಿಪೊ ವ್ಯಾಪ್ತಿಯ ಬಸ್‌ಗಳಿಗೆ ಸ್ಥಳೀಯ ಖಾಸಗಿ ಬಂಕ್‌ಗಳಲ್ಲಿ ಡೀಸೆಲ್ ಹಾಕಿಸುವ ಪ್ರಕ್ರಿಯೆ ಆರಂಭವಾಗಿರುವುದರಿಂದ ಬಿಎಂಟಿಸಿ ಬಸ್‌ಗಳು ಸೋಮವಾರ ನಗರದ ಬಂಕ್‌ಗಳ ಮುಂದೆ ಸರದಿಯಲ್ಲಿ ನಿಂತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.