ಬೆಂಗಳೂರು: ಜ್ಞಾನಭಾರತಿ ಸಮೀಪದ ರೈಲ್ವೆ ಲೇಔಟ್ನಲ್ಲಿ ನಡೆದಿದ್ದ ಸುಕನ್ಯಾ (25) ಎಂಬುವರ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು ಆರೋಪಿ ಶಿವಲಿಂಗೇಗೌಡ (37) ಎಂಬಾತನನ್ನು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಸಕನ್ಯಾಳನ್ನು ಪ್ರೀತಿಸಿದ್ದ ಆತ ವಿವಾಹವಾಗುವುದಾಗಿ ನಂಬಿಸಿ ನಗರಕ್ಕೆ ಕರೆದುಕೊಂಡು ಬಂದು ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರೇಣುಕಾ ಎಂಬುವರನ್ನು ವಿವಾಹವಾಗಿದ್ದ ಶಿವಲಿಂಗೇಗೌಡನಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಮತ್ತು ಮಕ್ಕಳ ಜತೆ ಆತ ಜ್ಞಾನಜ್ಯೋತಿ ನಗರದಲ್ಲಿ ನೆಲೆಸಿದ್ದ. ಟ್ರಾವೆಲ್ಸ್ ಕಂಪೆನಿಯಲ್ಲಿ ಚಾಲಕನಾಗಿದ್ದ ಆತ ಕೆಲಸದ ಮೇಲೆ ತಮಿಳುನಾಡಿನ ನಾಗರಕೋಯಿಲ್ಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿ ಟೀ ಅಂಗಡಿ ನಡೆಸುತ್ತಿದ್ದ ಸುಕನ್ಯಾಳ ಪರಿಚಯವಾಗಿತ್ತು.
ಮೂರು ವರ್ಷಗಳಿಂದ ಅವರಿಬ್ಬರು ಪ್ರೀತಿಸುತ್ತಿದ್ದರು. ವಿವಾಹವಾಗುವುದಾಗಿ ಆಕೆಯನ್ನು ಕರೆದುಕೊಂಡು ಬಂದು ಜ್ಞಾನಜ್ಯೋತಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದ. ಅಕ್ರಮ ಸಂಬಂಧ ವಿಷಯ ಗೊತ್ತಾದ ನಂತರ ರೇಣುಕಾ ಅವರು ಪತಿ ಮತ್ತು ಆತನ ಪ್ರೇಯಸಿಯ ಜತೆ ಜಗಳವಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಎಲ್ಲ ಘಟನೆಗಳಿಂದ ಮನನೊಂದ ಸುಕನ್ಯಾ ತಮಿಳುನಾಡಿಗೆ ಹೋಗಿ ನೆಲೆಸೋಣ ಎಂದು ಶಿವಲಿಂಗೇಗೌಡನಿಗೆ ಪೀಡಿಸಲಾರಂಭಿಸಿದಳು. ಇದಕ್ಕೆ ಆತ ಒಪ್ಪದಿದ್ದಾಗ, ತನ್ನಿಂದ ಪಡೆದಿದ್ದ 20 ಸಾವಿರ ರೂಪಾಯಿ ಹಣವನ್ನಾದರೂ ವಾಪಸ್ ನೀಡು ಎಂದ ಕೇಳಲಾರಂಭಿಸಿದಳು. ಹಣ ನೀಡದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿಯೂ ಆಕೆ ಬೆದರಿಕೆ ಹಾಕಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದರಿಂದ ಕೋಪಗೊಂಡ ಆತ ಆಕೆಯನ್ನು ರೈಲ್ವೆ ಲೇಔಟ್ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕತ್ತು ಕೊಯ್ದು ಕೊಲೆ ಮಾಡಿದ್ದ. ಅನಂತರ ಆತನೇ ಬಂದು ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ಕೊಟ್ಟಿದ್ದ.
ಠಾಣೆಗೆ ಬರಲು ಆತನಿಗೆ ತಿಳಿಸಿದ್ದರೂ ಆತ ಬರದ ಕಾರಣ ಸಂಶಯ ಬಲಗೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.