ADVERTISEMENT

ಬಿಎಂಟಿಎಫ್ ಮುಖ್ಯಸ್ಥರ ವಿರುದ್ಧ ಆರೋಪ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 19:30 IST
Last Updated 3 ಮಾರ್ಚ್ 2012, 19:30 IST

ಬೆಂಗಳೂರು: ಬಿಎಂಟಿಎಫ್ ಮುಖ್ಯಸ್ಥ ಆರ್.ಪಿ. ಶರ್ಮಾ ಅವರು ನಕ್ಷೆ ಮಂಜೂರಾತಿ ಪಡೆಯದೆ ದೊಡ್ಡಗುಬ್ಬಿ ಗ್ರಾಮದಲ್ಲಿ ಮನೆ ನಿರ್ಮಿಸುತ್ತಿದ್ದಾರೆ ಎಂದು ಪಾಲಿಕೆಯ ವಿರೋಧ ಎಂ. ಉದಯಶಂಕರ್ ಶನಿವಾರ ಆರೋಪಿಸಿದರು.

ಪಾಲಿಕೆಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಬಿಎಂಟಿಎಫ್ ಮುಖ್ಯಸ್ಥರು ವೈಭವೋಪೇತ ಮನೆ ನಿರ್ಮಿಸುತ್ತಿದ್ದಾರೆ ಎಂದು ದೂರಿದರು.
`ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಅವಕಾಶ ಇಲ್ಲದಿದ್ದರೂ ಎಂಜಿನಿಯರ್‌ಗಳಿಗೆ ನೋಟಿಸ್ ನೀಡುವ ಬಿಎಂಟಿಎಫ್ ಮುಖ್ಯಸ್ಥರು ಇದೀಗ ತಾವೇ ಕಾನೂನು ಉಲ್ಲಂಘಿಸಿ ಮನೆ ನಿರ್ಮಾಣ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ?~ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಚಿತ್ರವನ್ನು ಪ್ರದರ್ಶಿಸಿದ ಉದಯಶಂಕರ್, `ಎರಡು ನಿವೇಶನಗಳನ್ನು ಒಟ್ಟಿಗೆ ಸೇರಿಸಿ ಒಂದೇ ಮನೆ ನಿರ್ಮಿಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ~ ಎಂದರು. ಅಲ್ಲದೆ, `ಕಾನೂನು ಉಲ್ಲಂಘಿಸಿರುವ ಆರೋಪದ ಮೇರೆಗೆ ಬಿಎಂಟಿಎಫ್ ಮುಖ್ಯಸ್ಥರ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು~ ಎಂದು ಆಗ್ರಹಿಸಿದರು.
 

ಪತ್ರಕರ್ತರ ಮೇಲೆ ಹಲ್ಲೆ-ಖಂಡನೆ

ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲರು ಪತ್ರಕರ್ತರ ಮೇಲೆ ನಡೆಸಿದ ಹಲ್ಲೆಯನ್ನು  ಖಂಡಿಸಿ ನಿರ್ಣಯ ಅಂಗೀಕರಿಸುವಂತೆ ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್ ಹಾಗೂ ಜೆಡಿಎಸ್ ಗುಂಪಿನ ನಾಯಕ ಪದ್ಮನಾಭರೆಡ್ಡಿ ಆಗ್ರಹಿಸಿದರು. ಆದರೆ, ಮುಖ್ಯಮಂತ್ರಿಗಳು ಈಗಾಗಲೇ ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿರುವುದರಿಂದ ನಿರ್ಣಯ ಅಂಗೀಕರಿಸುವ ಅಗತ್ಯವಿಲ್ಲ. ಆದರೆ, ಪತ್ರಕರ್ತರ ಮೇಲೆ ವಕೀಲರು ನಡೆಸಿದ ದಾಳಿ ಖಂಡನೀಯ ಎಂದು ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ ಹಾಗೂ ಹಿರಿಯ ಸದಸ್ಯ ಗಂಗಬೈರಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.