ADVERTISEMENT

ಬಿಗಿ ಭದ್ರತೆ, ಬೆಂಬಲಿಗರಿಗೆ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 18:30 IST
Last Updated 12 ಜುಲೈ 2012, 18:30 IST

ಬೆಂಗಳೂರು: ಜಗದೀಶ ಶೆಟ್ಟರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ವೀಕ್ಷಣೆಗೆ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಬೆಂಗಳೂರಿಗೆ ಬರುತ್ತಾರೆ ಎಂಬ ಸೂಚನೆ ಇದ್ದ ಕಾರಣ, ಅರಮನೆ ಮೈದಾನದಲ್ಲಿರುವ ಗಾಯತ್ರಿ ವಿಹಾರದಲ್ಲಿ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ರಾಜಭವನದ ಗಾಜಿನ ಮನೆಯಲ್ಲಿ ಸೀಮಿತ ಸಂಖ್ಯೆಯ ಜನಕ್ಕೆ ಮಾತ್ರ ವೀಕ್ಷಿಸಲು ಅವಕಾಶ ಇರುವ ಕಾರಣ ಈ ವ್ಯವಸ್ಥೆ ಮಾಡಲಾಗಿತ್ತು.

ಆದರೆ, ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಶೆಟ್ಟರ್ ಬೆಂಬಲಿಗರು, ಪ್ರಮಾಣ ವಚನ ಸ್ವೀಕರಿಸಿದ ಮುಖಂಡರ ಬೆಂಬಲಿಗರು ರಾಜಭವನಕ್ಕೆ ಬಂದರು. ಪ್ರತಿಯೊಬ್ಬರ ಬಳಿಯೂ ಪಾಸ್ ಇದೆಯೇ ಎಂಬುದನ್ನು ಪರಿಕ್ಷಿಸಿಯೇ ಒಳಕ್ಕೆ ಬಿಡುತ್ತಿದ್ದ ಪೊಲೀಸರಿಗೆ, ತಂಡೋಪತಂಡವಾಗಿ ಬರುತ್ತಿದ್ದ ಜನರನ್ನು ನಿಯಂತ್ರಿಸುವುದು ಹರಸಾಹಸವೇ ಆಯಿತು.

ರಸ್ತೆ ಬಂದ್: ಕಾರ್ಯಕ್ರಮದ ಕಾರಣ ರಾಜಭವನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ವಾಹನಗಳನ್ನು `ಕ್ಯಾಪಿಟಲ್~ ಹೋಟೆಲ್ ಬಳಿಯೇ ತಡೆಯಲಾಗುತ್ತಿತ್ತು. ಅಲ್ಲಿಂದಲೇ ಬ್ಯಾರಿಕೇಡ್‌ಗಳನ್ನು ಹಾಕಿ, ಜನರನ್ನು ಸರದಿಯಲ್ಲಿ ರಾಜಭವನದೆಡೆಗೆ ಕಳುಹಿಸಲಾಗುತ್ತಿತ್ತು. ಈ ಪ್ರಮಾಣದ ಬಿಗಿ ಭದ್ರತೆ ಬೆಂಬಲಿಗರಿಗೆ ಕಿರಿಕಿರಿ ಎನಿಸಿತು. ಆದರೆ ಭದ್ರತೆಯ ದೃಷ್ಟಿಯಿಂದ ಬಿಗಿ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಪೊಲೀಸರು ತಮ್ಮ ಕ್ರಮ ಸಮರ್ಥಿಸಿಕೊಂಡರು.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ರಾಜಭವನಕ್ಕೆ ಬಂದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭದ್ರತಾ ಸಿಬ್ಬಂದಿ ಪ್ರವೇಶ ದ್ವಾರದ ಬಳಿಯೇ ತಡೆದು, `ನೀವು ಯಾರು?~ ಎಂದು ಪ್ರಶ್ನಿಸಿದ ಘಟನೆಯೂ ನಡೆಯಿತು! ನಂತರ ಪೂಜಾರಿ ಅವರು ತಮ್ಮ ಪರಿಚಯ ಹೇಳಿಕೊಂಡು ಒಳ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.