ADVERTISEMENT

ಬಿಡಿಎ ಮಾಸ್ಟರ್ ಪ್ಲಾನ್ ಅಸಮರ್ಪಕ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 19:55 IST
Last Updated 7 ಜುಲೈ 2012, 19:55 IST

ಬೆಂಗಳೂರು: `ನಗರದ ಸಮಗ್ರ ಅಭಿವೃದ್ಧಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಿದ್ಧಪಡಿಸುವ ಮಾಸ್ಟರ್ ಪ್ಲಾನ್ ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ. ಮಾಸ್ಟರ್ ಪ್ಲಾನ್ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಸರ್ಕಾರದ ಯಾವುದಾದರೊಂದು ಇಲಾಖೆ ವಹಿಸಿಕೊಳ್ಳಬೇಕು.

ಅದು ಅನುಷ್ಠಾನ ಆಗದಿದ್ದರೆ ಯೋಜನೆ ರೂಪಿಸಿದರೂ ವ್ಯರ್ಥ~ ಎಂದು 2015ರ ಬಿಡಿಎ ಮಾಸ್ಟರ್ ಪ್ಲಾನ್‌ನ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಪಿ.ಎಸ್.ಎಸ್. ಥಾಮಸ್ ಅಭಿಪ್ರಾಯಪಟ್ಟರು.

`ಸಿವಿಕ್ ಬೆಂಗಳೂರು~ ಸ್ವಯಂಸೇವಾ ಸಂಸ್ಥೆಯ ಆಶ್ರಯದಲ್ಲಿ `ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಪರಿಷ್ಕೃತ ಮಾಸ್ಟರ್ ಪ್ಲಾನ್ 2035~ ಕುರಿತು ನಗರದಲ್ಲಿ ಶನಿವಾರ ಆಯೋಜಿಸಿದ್ದ ದುಂಡುಮೇಜಿನ ಚರ್ಚೆಯಲ್ಲಿ ಮಾತನಾಡಿದರು. 

`2015ರ ಮಾಸ್ಟರ್ ಪ್ಲಾನ್ ಬಗ್ಗೆ ಬಿಡಿಎ ವೆಬ್‌ಸೈಟ್‌ನಲ್ಲಿ ಮಾಹಿತಿ ಮಾತ್ರ ಇದ್ದು, ಯೋಜನೆಯ ಅನುಷ್ಠಾನದ ಬಗ್ಗೆ ಉಲ್ಲೇಖ ಇಲ್ಲ. ಮಾಸ್ಟರ್ ಪ್ಲಾನ್‌ಗೆ ಬಿಡಿಎ ನೋಡಲ್ ಏಜೆನ್ಸಿಯಾಗಿದ್ದು, ಸಂಸ್ಥೆಯನ್ನು ಬಲಪಡಿಸುವ ಅಗತ್ಯ ಇದೆ. ವ್ಯವಸ್ಥೆಯ ಲೋಪದೋಷಗಳನ್ನು ಪತ್ತೆ ಹಚ್ಚಿ ನಗರದ ಜನತೆಗೆ ಉತ್ತಮ ಯೋಜನೆಯನ್ನು ನೀಡಬೇಕು~ ಎಂದು ಅವರು ಸಲಹೆ ನೀಡಿದರು.

`2015ರ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವ ವೇಳೆಗೆ ಜಲಮಂಡಳಿ, ಬೆಸ್ಕಾಂ, ಬಿಎಂಟಿಸಿ ಸೇರಿದಂತೆ ವಿವಿಧ ಇಲಾಖೆಗಳು ಯಾವುದೇ ಮಾಹಿತಿ ಹಾಗೂ ಸಲಹೆ ನೀಡಿಲ್ಲ. ಈ ಬಾರಿ ಎಲ್ಲ ಇಲಾಖೆಗಳು ಕಡ್ಡಾಯವಾಗಿ ಸಲಹೆ ನೀಡುವ ವ್ಯವಸ್ಥೆ ಆಗಬೇಕು~ ಎಂದರು.

`2035ರ ಮಾಸ್ಟರ್ ಪ್ಲಾನ್ ಈಗ ಪ್ರಾಥಮಿಕ ಹಂತದಲ್ಲಿದೆ. ಕೊನೆಯ ಹಂತದಲ್ಲಿ ಸಲಹೆ ನೀಡುವ ಬದಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸುವ ಪ್ರಕ್ರಿಯೆ ಆರಂಭಿಕ ಹಂತದಲ್ಲಿದ್ದಾಗಲೇ ಜನರು ಸಲಹೆಗಳನ್ನು ನೀಡಬೇಕು ಎಂದು ತಿಳಿಸಿದರು.

ನಗರ ಯೋಜನೆಯ ತಜ್ಞರಾದ ಅಂಜಲಿ ಮೋಹನ್ ಮಾತನಾಡಿ, `ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಾಗ ಬಿಡಿಎ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಲಹೆ ಸೂಚನೆಗಳನ್ನು ಸ್ವೀಕರಿಸಬೇಕು~ ಎಂದರು. 
`ಸಿವಿಕ್ ಬೆಂಗಳೂರು~ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್, `ಮಾಸ್ಟರ್ ಪ್ಲಾನ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು~ ಎಂದು ನುಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.