ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಕೆಎಸ್ಸಿಎ ಕ್ಲಬ್ಹೌಸ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳು ಪ್ರವೇಶಿಸದಂತೆ ಕೆಎಸ್ಸಿಎ ಆಡಳಿತ ಕಳೆದ ನಾಲ್ಕು ದಿನಗಳಿಂದ ನಿರ್ಬಂಧ ವಿಧಿಸಿದೆ. ಕೆಎಸ್ಸಿಎ ಸದಸ್ಯರು ಮತ್ತು ಮೆಟ್ರೊ ರೈಲು ನಿಗಮದ ಸಿಬ್ಬಂದಿ ವಾಹನಗಳಿಗೆ ಮಾತ್ರ ಈ ರಸ್ತೆಗೆ ಹೋಗಲು ಅವಕಾಶ ನೀಡಲಾಗುತ್ತಿದೆ.
ಎಂ.ಜಿ. ರಸ್ತೆಯಿಂದ ಕ್ಲಬ್ಹೌಸ್ ಮೂಲಕ ಹೋಗುವ ಈ ಮಾರ್ಗ ಕಬ್ಬನ್ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಮೆಟ್ರೊ ಮಾರ್ಗ ನಿರ್ಮಾಣ ಕಾಮಗಾರಿ ನಡೆದಿರುವ ಕಾರಣ ಕಬ್ಬನ್ ರಸ್ತೆ ಕಡೆಯಿಂದ ಪ್ರವೇಶಿಸುವ ತುದಿಯನ್ನು ಮುಚ್ಚಲಾಗಿದೆ. ಈ ರಸ್ತೆಯನ್ನು ಕೆಎಸ್ಸಿಎ ಸದಸ್ಯರಲ್ಲದೆ ಸಾರ್ವಜನಿಕರೂ ವಾಹನಗಳ ನಿಲುಗಡೆಗೆ ಬಳಕೆ ಮಾಡುತ್ತಿದ್ದರು.
ಬಿಬಿಎಂಪಿಗೆ ಸೇರಿದ ಈ ರಸ್ತೆ ಇದಾಗಿದ್ದು, ಮೆಟ್ರೊ ಮಾರ್ಗ ನಿರ್ಮಾಣ ಕಾಮಗಾರಿ ಮುಗಿಯುವವರೆಗೆ ನಿರ್ವಹಣೆ ಮಾಡಲು ವಾರದ ಹಿಂದೆಯಷ್ಟೇ ಕೆಎಸ್ಸಿಎಗೆ ಹಸ್ತಾಂತರಿಸಲಾಗಿದೆ. ಕೆಎಸ್ಸಿಎ ಆಡಳಿತ ಎಂ.ಜಿ. ರಸ್ತೆಯಿಂದ ಈ ಮಾರ್ಗದ ಪ್ರವೇಶ ಸ್ಥಳದಲ್ಲಿಯೇ ಸಂಚಾರ ತಡೆ ಗೇಟ್ ಅಳವಡಿಸಿದ್ದು, ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಿದೆ.
‘ಸಂಚಾರಕ್ಕೆ ಮುಕ್ತವಾಗುವವರೆಗೆ ಕ್ಲಬ್ಹೌಸ್ ರಸ್ತೆಯನ್ನು ನಿರ್ವಹಣೆ ಮಾಡಲು ಕೆಎಸ್ಸಿಎಗೆ ನಾವೇ ಅನುಮತಿ ನೀಡಿದ್ದೇವೆ’ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ನರಸಿಂಹರಾಜು ಹೇಳುತ್ತಾರೆ.
‘ಕಬ್ಬನ್ ರಸ್ತೆ ಕಡೆಗಿನ ತುದಿಯನ್ನು ಮುಚ್ಚಲಾಗಿದ್ದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಇಲ್ಲ. ಇದರಿಂದ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರು ಕೆಎಸ್ಸಿಎಯಿಂದ ಬಂದಿತ್ತು. ರಸ್ತೆ ನಿರ್ವಹಣೆಗೆ ಅವರು ಆಸಕ್ತಿ ವಹಿಸಿದ್ದರಿಂದ ಈ ಅನುಮತಿಯನ್ನು ನೀಡಿದ್ದೇವೆ’ ಎಂದು ಅವರು ವಿವರಿಸುತ್ತಾರೆ.
‘ಇದೊಂದು ತಾತ್ಪೂರ್ತಿಕ ವ್ಯವಸ್ಥೆಯಾಗಿದ್ದು, ಮೆಟ್ರೊ ಕಾಮಗಾರಿ ಮುಗಿದ ಬಳಿಕ ರಸ್ತೆ ನಿರ್ವಹಣೆ ಹೊಣೆಯನ್ನು ಬಿಬಿಎಂಪಿಯೇ ಹೊರಲಿದೆ’ ಎಂದು ತಿಳಿಸುತ್ತಾರೆ.
ಎಂ.ಜಿ. ರಸ್ತೆಯೂ ಸೇರಿದಂತೆ ಸುತ್ತಲಿನ ಪ್ರದೇಶಗಳ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಈ ರಸ್ತೆ ವಾಹನ ನಿಲುಗಡೆ ತಾಣವಾಗಿ ಮಾರ್ಪಟ್ಟಿತ್ತು. ಈ ರಸ್ತೆಯಲ್ಲಿ ಸಂಚಾರವೂ ಇಲ್ಲದ್ದರಿಂದ ವಾಹನಗಳ ನಿಲುಗಡೆಗೆ ಅನುಕೂಲ ಆಗಿತ್ತು.
ಮೆಟ್ರೊ ಮಾರ್ಗ ನಿರ್ಮಾಣಕ್ಕೆ ಮಾರ್ಗವನ್ನು 2011ರಲ್ಲೇ ಬಂದ್ ಮಾಡಲಾಗಿದೆ. ಇದುವರೆಗೆ ಇಲ್ಲದ ಸಮಸ್ಯೆ ಏಕಾಏಕಿ ಉದ್ಭವವಾದದ್ದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರದು. ಪಂದ್ಯಗಳು ನಡೆದಾಗ ಭದ್ರತಾ ವ್ಯವಸ್ಥೆಗೆ ರಸ್ತೆಯನ್ನು ಮುಚ್ಚಲಾಗುತ್ತದೆ. ಆಗಿನ ಸಮಸ್ಯೆ ನಮಗೂ ಅರ್ಥವಾಗುತ್ತದೆ. ಆದರೆ, ಸಾರ್ವಜನಿಕರ ಉಪಯೋಗಕ್ಕೆ ಮೀಸಲಾದ ಈ ರಸ್ತೆಯನ್ನು ಕೆಎಸ್ಸಿಎ ಈಗ ಮುಚ್ಚಿದ್ದೇಕೆ ಎಂದು ಪ್ರಶ್ನಿಸುತ್ತಾರೆ.
‘ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಅನುಮತಿ ಪಡೆಯಲಾಗಿದ್ದು, ಭದ್ರತಾ ಕಾರಣಗಳಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕಾರಿನಲ್ಲೇ ಕುಳಿತು ಮದ್ಯಸೇವನೆ ಮಾಡಿ, ಗಲಾಟೆ ನಡೆಸಿದ ಪ್ರಕರಣಗಳು ಇಲ್ಲಿ ನಡೆದಿವೆ. ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಕುರಿತು ನಮ್ಮ ಭದ್ರತಾ ಸಿಬ್ಬಂದಿ ದೂರಿದ್ದರಿಂದ ಈ ಕ್ರಮ ಕೈಗೊಂಡಿದ್ದೇವೆ’ ಎಂದು ಕೆಎಸ್ಸಿಎ ಅಧಿಕಾರಿಗಳು ಹೇಳುತ್ತಾರೆ. ‘ರಸ್ತೆಯು ಸಾರ್ವಜನಿಕರ ಸ್ವತ್ತಾಗಿದ್ದು, ಕೆಎಸ್ಸಿಎ ನಿರ್ಬಂಧದಿಂದ ಮುಕ್ತಗೊಳಿಸಬೇಕು’ ಎಂದು ಇಲ್ಲಿ ನಿತ್ಯ ವಾಹನ ನಿಲುಗಡೆ ಮಾಡುತ್ತಿದ್ದ ಸಾರ್ವಜನಿಕರು ಬಿಬಿಎಂಪಿ ಆಯುಕ್ತರನ್ನು ಆಗ್ರಹಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.