ಬೆಂಗಳೂರು: ನಗರದಲ್ಲಿ ಭಾನುವಾರ ರಾಮನವಮಿ ಸಂಭ್ರಮ ಕಳೆಗಟ್ಟಿತ್ತು. ಬೆಳ್ಳಿಗ್ಗಿನಿಂದಲೇ ರಾಮನ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಭಕ್ತರು ಮಡಿಯುಟ್ಟು ರಾಮನಾಮ ಜಪ ಮಾಡಿದರು.
‘ಶ್ರೀರಾಮನವಮಿಯ ದಿವಸ ರಾಮನಾಮಾಮೃತವೆ ಪಾನಕ...’ ಎಂಬ ಕವಿ ಗೋಪಾಲಕೃಷ್ಣ ಅಡಿಗರ ಪದ್ಯವನ್ನು ನೆನಪಿಸುವಂತೆ ವಿಜೃಂಭಣೆಯ ರಾಮನವಮಿ ಆಚರಿಸಲಾಯಿತು.
ರಾಮನವಮಿಯ ಅಂಗವಾಗಿ ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳು ಮಾತ್ರವಲ್ಲದೆ ವಿವಿಧ ಭಾಗಗಳಲ್ಲಿ ಸಂಗೀತೋತ್ಸವ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ನೀರು, ಮಜ್ಜಿಗೆ, ಕೋಸಂಬರಿ, ಕರಬೂಜ, ಮಾವು ಹಣ್ಣಿನಿಂದ ಮಾಡಿದ ಪಾನಕ ವಿತರಣೆ ಹಬ್ಬದ ಕಳೆಯನ್ನು ಹೆಚ್ಚಿಸಿತ್ತು.
ರಾಜಾಜಿನಗರದ ರಾಮಮಂದಿರ, ಕೋದಂಡರಾಮಸ್ವಾಮಿ ದೇವಾಲಯದಲ್ಲಿ ದೇವರ ಮೂರ್ತಿಗೆ ಹೂವಿನ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಅಪಾರ ಸಂಖ್ಯೆಯ ಭಕ್ತರು ಇಲ್ಲಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.
ನಗರದಲ್ಲಿ ಭಾನುವಾರ ಖೋಡೆ ವೃತ್ತದಲ್ಲಿ ಬಳಿ ರಾಮ ಮತ್ತು ಆಂಜನೇಯನ ವೇಷ ಧರಿಸಿ ಪಾನಕ ಮಜ್ಜಿಗೆ ವಿತರಿಸಿ ಶ್ರೀ ರಾಮನವಮಿ ಆಚರಿಸಿದರು. ಪ್ರಜಾವಾಣಿ ಚಿತ್ರ/ ರಂಜು ಪಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.