ಬೆಂಗಳೂರು: ಕಾವೇರಿ ನೀರು ಪೋಲು ತಡೆಗಾಗಿ ಜಲಮಂಡಳಿಯು ಬೆಂಗಳೂರು ದಕ್ಷಿಣ ಭಾಗದಲ್ಲಿ ಕೈಗೆತ್ತಿಕೊಂಡಿರುವ ‘ಲೆಕ್ಕಕ್ಕೆ ಸಿಗದ ನೀರು ಪತ್ತೆ’ ಯೋಜನೆಯಿಂದಾಗಿ ಈ ಭಾಗದಲ್ಲಿ ಶೇ 20 ನೀರಿನ ಪೋಲು ಕಡಿಮೆಯಾಗಿದೆ.
 
 ರಾಜಧಾನಿಯ ನೀರಿನ ಬೇಡಿಕೆ ದಿನಕ್ಕೆ 1200ರಿಂದ 1,350 ದಶಲಕ್ಷ ಲೀಟರ್ನಷ್ಟು ಇದೆ. ಕಾವೇರಿ 4ನೇ ಹಂತ 2ನೇ ಘಟ್ಟ ಯೋಜನೆಯ ಅನುಷ್ಠಾನದ ಬಳಿಕ ನಗರಕ್ಕೆ ದಿನಕ್ಕೆ 1,200 ದಶಲಕ್ಷ ಲೀಟರ್ ನೀರು ಸರಬರಾಜು ಆಗುತ್ತಿದೆ. ಕಾವೇರಿಯಿಂದ ನಗರಕ್ಕೆ ಪೂರೈಕೆಯಾಗುವ ನೀರಿನಲ್ಲಿ ಶೇ 43ರಷ್ಟು (400 ದಶಲಕ್ಷ ಲೀಟರ್) ಪ್ರಮಾಣ ಮಾಯವಾಗುತ್ತಿದೆ. ಈ ನೀರನ್ನು ‘ಲೆಕ್ಕಕ್ಕೆ ಸಿಗದ ನೀರು’ ಎಂದು ಜಲಮಂಡಳಿ ವ್ಯಾಖ್ಯಾನಿಸಿದೆ.
 
   ಈ ಹಿನ್ನೆಲೆಯಲ್ಲಿ ದಕ್ಷಿಣ ಭಾಗದಲ್ಲಿ ಸಮಗ್ರ ಸಮೀಕ್ಷೆ ನಡೆಸಿ ಪೋಲಾಗುತ್ತಿರುವ ನೀರಿನ ಪ್ರಮಾಣವನ್ನು ಶೇ 16ಕ್ಕೆ ಇಳಿಸಲು ಕ್ರಮ ಕೈಗೊಳ್ಳಲು ಎಲ್ ಅಂಡ್ ಟಿ ಕಂಪೆನಿಗೆ ಗುತ್ತಿಗೆ ವಹಿಸಲಾಗಿದೆ. ಇಲ್ಲಿ ಪೋಲು ತಡೆಗಟ್ಟಲು ₨173.49 ಕೋಟಿ ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಐದು ವಿಧಾನಸಭಾ ಕ್ಷೇತ್ರಗಳಿಗೆ  (53 ಕಿ.ಮೀ) ಪ್ರತಿನಿತ್ಯ ಅಂದಾಜು 400 ದಶಲಕ್ಷ ಲೀಟರ್ ನೀರು ವಿತರಣೆ ಮಾಡಲಾಗುತ್ತಿದೆ. ಯೋಜನೆ ಪೂರ್ಣಗೊಂಡ ಬಳಿಕ ದಿನಕ್ಕೆ 50 ದಶಲಕ್ಷ ಲೀಟರ್ ನೀರು ಉಳಿತಾಯವಾಗಲಿದೆ ಎಂದು ಜಲಮಂಡಳಿ ಅಂದಾಜಿಸಿದೆ.
 
 ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಪತ್ತೆ ಹಚ್ಚಲು ಗಡಿ ವಾಲ್ವ್ಗಳು ಹಾಗೂ ಸ್ಟೆಪ್ ವಾಲ್ವ್ಗಳು ಅಳವಡಿಕೆ, ಹಳೆಯ ವಾಲ್ವ್ಗಳ ಬದಲಾವಣೆ, ನೀರಿನ ಒತ್ತಡ, ಹರಿವು ಕಣ್ಗಾವಲು ಪಾಯಿಂಟ್ಗಳ ಅಳವಡಿಸಿ ಹೊಸ ವಲಯಗಳನ್ನು (ಡಿಸ್ಟ್ರಿಕ್ ಮೀಟರ್ ಏರಿಯಾ) ಸೃಷ್ಟಿಸಲಾಗುವುದು. 82 ಹೊಸ ವಲಯಗಳ ಪೈಕಿ 36 ವಲಯಗಳು ಈಗಾಗಲೇ ಪೂರ್ಣಗೊಂಡಿವೆ.
 
 ಬೆಂಗಳೂರು ದಕ್ಷಿಣ ಭಾಗದಲ್ಲಿ 1,05,696 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಇದೆ. ಇದರಲ್ಲಿ ಶೇ 75ರಷ್ಟು ಮನೆಗಳ ಸಂಪರ್ಕವನ್ನು ಬದಲಿಸಲಾಗುತ್ತಿದೆ. ಶೇ 40 ಮಂದಿಗೆ ಹೊಸ ಮೀಟರ್ಗಳನ್ನು ನೀಡಲಾಗುತ್ತಿದೆ. ಶೇ 54 ಗ್ರಾಹಕರ ಮೀಟರ್ಗಳ ಪರೀಕ್ಷೆ ಮಾಡಲಾಗುತ್ತಿದೆ. 636 ನೀರಿನ ಒತ್ತಡದ ಮೇಲ್ವಿಚಾರಣಾ ಪಾಯಿಂಟ್ಗಳನ್ನು ಅಳವಡಿಸಲಾಗುತ್ತಿದೆ. 
 
 ಜಲಮಂಡಳಿಯು ಬೆಂಗಳೂರು ದಕ್ಷಿಣ ಭಾಗದಲ್ಲಿ ನೀರಿನ ಪೋಲು ತಡೆಗಟ್ಟಲು ಯೋಜನೆ ಕೈಗೆತ್ತಿಕೊ-ಳ್ಳಲಿದ್ದು, ಯೋಜನೆ ಆರಂಭಿಕ ಹಂತದಲ್ಲಿದೆ. ಇಲ್ಲಿ 1,33,000 ನೀರಿನ ಸಂಪರ್ಕ ಇವೆ. ಇಲ್ಲಿ ನೀರಿನ ಪೋಲು ಪ್ರಮಾಣವನ್ನು ಶೇ 45 ರಿಂದ ಶೇ 20ಕ್ಕೆ ಇಳಿಸುವ ಉದ್ದೇಶ ಇದೆ. ಇದರ ವೆಚ್ಚ ₨294.1 ಕೋಟಿ. ಇಲ್ಲಿ 99,750 ಮನೆಗಳ ಕುಡಿಯುವ ನೀರಿನ ಸಂಪರ್ಕ ಬದಲಿಸಲಾಗುವುದು. 59,856 ನೀರಿನ ಮೀಟರ್ಗಳನ್ನು, 664 ನೀರಿನ ಒತ್ತಡ ಮೇಲ್ವಿಚಾರಣಾ ಪಾಯಿಂಟ್ಗಳನ್ನು ಅಳವಡಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.